bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
/
Mark 4
Mark 4
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 5 →
1
ಯೇಸು ಮತ್ತೊಮ್ಮೆ ಗಲಿಲಾಯ ಸರೋವರದ ತೀರದಲ್ಲಿ ಬೋಧಿಸಲಾರಂಭಿಸಿದರು. ಜನರು ಗುಂಪುಗುಂಪಾಗಿ ಯೇಸುವಿನ ಸುತ್ತಲೂ ನೆರೆದು ಬಂದದ್ದರಿಂದ ಯೇಸು ಸರೋವರದಲ್ಲಿದ್ದ ದೋಣಿಯನ್ನು ಹತ್ತಿ ಕುಳಿತುಕೊಂಡರು. ಜನರು ದಡದಲ್ಲಿ ಸುತ್ತಲೂ ನಿಂತಿದ್ದರು.
2
ಯೇಸು ಸಾಮ್ಯಗಳ ಮೂಲಕ ಅನೇಕ ಸಂಗತಿಗಳನ್ನು ಅವರಿಗೆ ಬೋಧಿಸಿ ಹೇಳಿದ್ದೇನೆಂದರೆ:
3
“ಕೇಳಿರಿ! ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು.
4
ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು. ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
5
ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
6
ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
7
ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಆ ಎಳೆಯ ಸಸಿಗಳನ್ನು ಅಡಗಿಸಿಬಿಟ್ಟಿದ್ದರಿಂದ ಅವು ಫಲ ಕೊಡಲಿಲ್ಲ.
8
ಇನ್ನು ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಬೆಳೆದು ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಟ್ಟವು.”
9
ಅನಂತರ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ,” ಎಂದು ಹೇಳಿದರು.
10
ಯೇಸು ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರು ಮತ್ತು ಯೇಸುವಿನ ಸುತ್ತಲಿದ್ದವರು ಬಂದು ಆ ಸಾಮ್ಯಗಳ ವಿಷಯವಾಗಿ ಕೇಳಿದರು.
11
ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯವನ್ನು ತಿಳಿದುಕೊಳ್ಳುವ ಜ್ಞಾನ ನಿಮಗೆ ಕೊಡಲಾಗಿದೆ. ಆದರೆ ಹೊರಗಿನವರಿಗೆ ಎಲ್ಲವೂ ಸಾಮ್ಯದ ರೂಪದಲ್ಲಿ ಹೇಳಲಾಗಿದೆ.
12
ಈ ಕಾರಣದಿಂದ, “ ‘ಅವರು ಕಣ್ಣಿದ್ದರೂ ಕಾಣುವುದಿಲ್ಲ. ಕೇಳಿಸಿಕೊಳ್ಳುತ್ತಿದ್ದರೂ ಗ್ರಹಿಸುವುದಿಲ್ಲ. ಹಾಗೆ ಮಾಡುವುದಾದರೆ, ಅವರು ದೇವರ ಕಡೆಗೆ ತಿರುಗಿಕೊಂಡು ಕ್ಷಮೆಹೊಂದುತ್ತಿದ್ದರು!’ ” ಎಂದರು.
13
ಅನಂತರ ಯೇಸು ಅವರಿಗೆ, “ನಿಮಗೆ ಈ ಸಾಮ್ಯ ಅರ್ಥವಾಗಲಿಲ್ಲವೇ? ಹಾಗಾದರೆ ನೀವು ಬೇರೆ ಸಾಮ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?
14
ರೈತನು ‘ವಾಕ್ಯ’ ಎಂಬ ಬೀಜ ಬಿತ್ತುತ್ತಾನೆ.
15
ಕೆಲವರು ದಾರಿಯ ಪಕ್ಕದಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯ ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ದೇವರ ವಾಕ್ಯವನ್ನು ತೆಗೆದುಬಿಡುತ್ತಾನೆ.
16
ಇನ್ನೂ ಕೆಲವರು ಕಲ್ಲು ನೆಲದ ಮೇಲೆ ಬಿದ್ದ ಬೀಜದಂತಿರುವರು. ಅವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
17
ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
18
ಮತ್ತೆ ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯವನ್ನು ಕೇಳುತ್ತಾರೆ.
19
ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ಇನ್ನಿತರ ಅಭಿಲಾಷೆಗಳು ಸೇರಿ ದೇವರ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ.
20
ಇನ್ನೂ ಕೆಲವರು ಒಳ್ಳೆಯ ಭೂಮಿಯಲ್ಲಿ ಬಿದ್ದ ಬೀಜದಂತಿದ್ದು, ವಾಕ್ಯವನ್ನು ಕೇಳಿ ಅಂಗೀಕರಿಸಿ, ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಡುತ್ತಾರೆ,” ಎಂದರು.
21
ಯೇಸು ಅವರಿಗೆ, “ಯಾರಾದರೂ ದೀಪವನ್ನು ತಂದು ಬೋಗುಣಿಯೊಳಗೆ ಅಥವಾ ಮಂಚದ ಕೆಳಗೆ ಇಡುತ್ತಾರೋ? ಅದರ ಬದಲು ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.
22
ಮರೆಯಾಗಿರುವ ಯಾವುದೂ ವ್ಯಕ್ತವಾಗದೇ ಇರುವುದಿಲ್ಲ. ರಹಸ್ಯಗಳು ಬಹಿರಂಗವಾಗದೆ ಇರುವುದಿಲ್ಲ.
23
ಕಿವಿಯುಳ್ಳವರು ಕೇಳಲಿ.”
24
ಮತ್ತು ಯೇಸು ಅವರಿಗೆ, “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು; ಇನ್ನೂ ಹೆಚ್ಚಾಗಿ ಸೇರಿಸಿಕೊಡಲಾಗುವುದು.
25
ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದರು.
26
ಯೇಸು, “ದೇವರ ರಾಜ್ಯವು ಹೀಗಿದೆ: ಒಬ್ಬನು ತನ್ನ ಹೊಲದಲ್ಲಿ ಬೀಜವನ್ನು ಬಿತ್ತಿದನು.
27
ರಾತ್ರಿ ಅವನು ಮಲಗಿದ್ದರೂ ಹಗಲು ಎದ್ದಿದ್ದರೂ ಆ ಬೀಜವು ಅವನಿಗೆ ತಿಳಿಯದ ರೀತಿಯಲ್ಲಿ ಅಂಕುರಿಸಿ ಬೆಳೆಯುತ್ತದೆ.
28
ಭೂಮಿಯು ಮೊದಲು ಸಸಿಯನ್ನು ಆಮೇಲೆ ಹೊಡೆಯನ್ನು ಅನಂತರ ತೆನೆಯ ತುಂಬಾ ಕಾಳನ್ನು ತನ್ನಷ್ಟಕ್ಕೆ ತಾನೇ ಬೆಳೆಸುತ್ತದೆ.
29
ಬೆಳೆಯು ಮಾಗಿದ ಕೂಡಲೇ, ಅವನು ಕುಡುಗೋಲನ್ನು ಉಪಯೋಗಿಸುತ್ತಾನೆ. ಏಕೆಂದರೆ ಸುಗ್ಗಿಯು ಬಂದಿದೆ,” ಎಂದರು.
30
ಯೇಸು ಮುಂದುವರಿಸಿ, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ ಅಥವಾ ಅದನ್ನು ವಿವರಿಸಲು ಯಾವ ಸಾಮ್ಯವನ್ನು ಉಪಯೋಗಿಸೋಣ?
31
ಅದು ಭೂಮಿಯ ಎಲ್ಲಾ ಬೀಜಗಳಿಗಿಂತ ಅತಿ ಚಿಕ್ಕದಾದ ಸಾಸಿವೆ ಕಾಳಿನಂತಿದೆ.
32
ಅದನ್ನು ಬಿತ್ತಿದ ಮೇಲೆ, ಅದು ಬೆಳೆದು ತೋಟದ ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡ ರೆಂಬೆಗಳುಳ್ಳ ಮರವಾಗಿ ಬೆಳೆಯುತ್ತದೆ. ಆಕಾಶದ ಪಕ್ಷಿಗಳು ಬಂದು ಅದರ ನೆರಳಿನಲ್ಲಿ ಗೂಡು ಕಟ್ಟಿ ವಾಸಿಸುತ್ತವೆ,” ಎಂದು ಹೇಳಿದರು.
33
ಈ ರೀತಿಯ ಅನೇಕ ಸಾಮ್ಯಗಳಿಂದ ಅವರ ಗ್ರಹಿಕೆಗೆ ತಕ್ಕ ಹಾಗೆ ಯೇಸು ಅವರಿಗೆ ವಾಕ್ಯವನ್ನು ಉಪದೇಶಿಸುತ್ತಿದ್ದರು.
34
ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ. ಆದರೆ ಯೇಸು ತಮ್ಮ ಶಿಷ್ಯರೊಡನೆ ಏಕಾಂತವಾಗಿದ್ದಾಗ ಮಾತ್ರ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
35
ಆ ದಿನ ಸಂಜೆಯಾದಾಗ ಯೇಸು ತಮ್ಮ ಶಿಷ್ಯರಿಗೆ, “ನಾವು ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು.
36
ಅವರು ಜನರ ಗುಂಪನ್ನು ಬಿಟ್ಟು, ಯೇಸುವನ್ನು ಇದ್ದ ಹಾಗೆಯೇ ದೋಣಿಯಲ್ಲಿ ಕರೆದುಕೊಂಡು ಹೋದರು. ಯೇಸುವಿನ ಸಂಗಡ ಬೇರೆ ದೋಣಿಗಳೂ ಇದ್ದವು.
37
ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿಯು ರಭಸವಾಗಿ ಬೀಸಿದ್ದರಿಂದ ಅಲೆಗಳು ದೋಣಿಗೆ ಅಪ್ಪಳಿಸಿದವು. ಆಗ ದೋಣಿಯೊಳಗೆ ನೀರು ನುಗ್ಗಿ ಅದು ಮುಳುಗಿ ಹೋಗುವುದರಲ್ಲಿತ್ತು.
38
ಯೇಸು ದೋಣಿಯ ಹಿಂಭಾಗದಲ್ಲಿ ದಿಂಬಿನ ಮೇಲೆ ಒರಗಿ ನಿದ್ದೆಮಾಡುತ್ತಿದ್ದರು. ಶಿಷ್ಯರು ಯೇಸುವನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿ ಸಾಯುತ್ತಿದ್ದೇವೆ. ನಿಮಗೆ ಚಿಂತೆಯಿಲ್ಲವೇ?” ಎಂದು ಕೇಳಿದರು.
39
ಯೇಸು ಎದ್ದು ಬಿರುಗಾಳಿಯನ್ನು ಗದರಿಸಿದರು ಮತ್ತು ಅಲೆಗಳಿಗೆ, “ಸುಮ್ಮನಿರು, ಶಾಂತವಾಗು!” ಎಂದು ಆಜ್ಞಾಪಿಸಿದರು. ಆಗ ಬಿರುಗಾಳಿಯು ನಿಂತು ಹೋಗಿ ಎಲ್ಲವೂ ಪ್ರಶಾಂತವಾಯಿತು.
40
ಯೇಸು ತಮ್ಮ ಶಿಷ್ಯರಿಗೆ, “ನೀವು ಏಕೆ ಭಯಪಡುತ್ತೀರಿ? ನಿಮಗೆ ಇನ್ನೂ ನಂಬಿಕೆಯಿಲ್ಲವೇ?” ಎಂದರು.
41
ಶಿಷ್ಯರು ಭಯಭೀತರಾಗಿ, “ಇವರು ಯಾರಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
← Chapter 3
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 5 →
All chapters:
1
2
3
4
5
6
7
8
9
10
11
12
13
14
15
16