bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada BSI JV (ಕನ್ನಡ ಸತ್ಯವೇದವು J.V. (BSI))
/
Luke 8
Luke 8
Kannada BSI JV (ಕನ್ನಡ ಸತ್ಯವೇದವು J.V. (BSI))
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 9 →
1
ತರುವಾಯ ಆತನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು. ಆತನ ಸಂಗಡ ಹನ್ನೆರಡು ಮಂದಿ ಶಿಷ್ಯರೂ ಇದ್ದರು.
2
ದೆವ್ವಗಳ ಕಾಟದಿಂದಲೂ ರೋಗಗಳಿಂದಲೂ ಗುಣಹೊಂದಿದ ಕೆಲವು ಹೆಂಗಸರು ಸಹ ಇದ್ದರು. ಈ ಹೆಂಗಸರು ಯಾರಾರಂದರೆ - ಏಳು ದೆವ್ವಗಳು ಬಿಟ್ಟುಹೋಗಿದ್ದ ಮಗ್ದಲದವಳೆಂಬ ಮರಿಯಳು,
3
ಹೆರೋದನ ಮನೆವಾರ್ತೆಯವನಾದ ಕೂಜನ ಹೆಂಡತಿ ಯೋಹಾನಳು, ಸುಸನ್ನಳು, ಇನ್ನು ಬೇರೆ ಅನೇಕರು. ಇವರು ತಮ್ಮ ಆಸ್ತಿಯಿಂದ ಆತನಿಗೆ ಕೊಟ್ಟು ಉಪಚಾರಮಾಡುತ್ತಿದ್ದರು.
4
ಬಹುಜನರು ಗುಂಪುಕೂಡಿರುವಾಗ ಪಟ್ಟಣ ಪಟ್ಟಣದಿಂದ ಜನರು ಆತನ ಬಳಿಗೆ ಬರುತ್ತಿರಲು ಆತನು ಸಾಮ್ಯರೂಪವಾಗಿ ಹೇಳಿದ್ದೇನಂದರೆ -
5
ಬಿತ್ತುವವನು ಬೀಜವನ್ನು ಬಿತ್ತುವದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು.
6
ಬೇರೆ ಕೆಲವು ಬೀಜ ಬಂಡೆಯ ಮೇಲೆ ಬಿದ್ದವು; ಅವು ಮೊಳೆತು ತ್ಯಾವವಿಲ್ಲದ ಕಾರಣ ಒಣಗಿಹೋದವು.
7
ಮತ್ತೆ ಕೆಲವು ಬೀಜ ಮುಳ್ಳುಗಿಡಗಳ ನಡುವೆ ಬಿದ್ದವು; ಅವುಗಳ ಸಂಗಡ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
8
ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ನೂರರಷ್ಟು ಫಲವನ್ನು ಕೊಟ್ಟವು. ಈ ಮಾತುಗಳನ್ನು ಹೇಳಿ ಆತನು - ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ ಎಂದು ಕೂಗಿದನು.
9
ಆತನ ಶಿಷ್ಯರು - ಈ ಸಾಮ್ಯದ ಅರ್ಥವೇನೆಂದು ಆತನನ್ನು ಕೇಳಿದಾಗ
10
ಆತನು - ದೇವರ ರಾಜ್ಯದ ಗುಟ್ಟುಗಳನ್ನು ತಿಳಿಯುವ ವರವು ನಿಮಗೇ ಕೊಟ್ಟದೆ, ಉಳಿದವರಿಗೆ ಕಣ್ಣಿದ್ದರೂ ನೋಡದಂತೆಯೂ, ಕಿವಿಯಿದ್ದರೂ ತಿಳುಕೊಳ್ಳದಂತೆಯೂ ಸಾಮ್ಯರೂಪವಾಗಿ ಹೇಳಲಾಗುತ್ತದೆ.
11
ಈ ಸಾಮ್ಯದ ಅರ್ಥವೇನಂದರೆ - ಆ ಬೀಜವೆಂದರೆ ದೇವರ ವಾಕ್ಯ.
12
ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದು ಬಿಡುತ್ತಾನೆ; ಇವರೇ ದಾರಿಯ ಮಗ್ಗುಲಾಗಿರುವವರು.
13
ಕೆಲವರು ವಾಕ್ಯವನ್ನು ಕೇಳಿದಾಗಲೇ ಅದನ್ನು ಸಂತೋಷದಿಂದ ಅಂಗೀಕರಿಸುತ್ತಾರೆ; ಇವರಿಗೆ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರವೇ ನಂಬಿಕೊಂಡಿದ್ದು ಶೋಧನೆಯ ಕಾಲದಲ್ಲಿ ಬಿದ್ದುಹೋಗುತ್ತಾರೆ; ಇವರೇ ಬಂಡೆಯ ನೆಲವಾಗಿರುವವರು.
14
ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ; ಇವರೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವರು.
15
ಮತ್ತೆ ಕೆಲವರು ವಾಕ್ಯವನ್ನು ಕೇಳಿ ಸುಗುಣವುಳ್ಳ ಒಳ್ಳೆಯ ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವವರು.
16
ಇದಲ್ಲದೆ ಯಾರೂ ದೀಪವನ್ನು ಹಚ್ಚಿ ಮಡಿಕೆಯಿಂದ ಮುಚ್ಚುವದಿಲ್ಲ, ಮಂಚದ ಕೆಳಗೂ ಇಡುವದಿಲ್ಲ; ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ.
17
ಪ್ರಕಾಶಕ್ಕೆ ಬಾರದ ಯಾವ ರಹಸ್ಯವೂ ಇಲ್ಲ; ಮತ್ತು ಗೊತ್ತಾಗದೆ ಬೈಲಿಗೆ ಬಾರದೆ ಇರುವಂಥ ಗುಟ್ಟು ಒಂದೂ ಇಲ್ಲ.
18
ಆದದರಿಂದ ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ; ಯಾಕಂದರೆ ಇದ್ದವನಿಗೆ ಕೊಡಲ್ಪಡುವದು; ಇಲ್ಲದವನ ಕಡೆಯಿಂದ ಅವನು ತನ್ನದೆಂದು ಎಣಿಸುವಂಥದೂ ತೆಗೆಯಲ್ಪಡುವದು ಅಂದನು.
19
ಆತನ ತಾಯಿಯೂ ತಮ್ಮಂದಿರೂ ಆತನಿದ್ದಲ್ಲಿಗೆ ಬಂದು ಜನರ ಗುಂಪಿನ ನಿವಿುತ್ತ ಆತನ ಬಳಿಗೆ ಸೇರಲಾರದೆ ಇದ್ದರು.
20
ಜನರು ಆತನಿಗೆ - ನಿನ್ನ ತಾಯಿಯೂ ನಿನ್ನ ತಮ್ಮಂದಿರೂ ನಿನ್ನನ್ನು ಕಾಣಬೇಕೆಂದು ಹೊರಗೆ ನಿಂತಿರುತ್ತಾರೆ ಎಂದು ಹೇಳಿದಾಗ
21
ಆತನು ಅವರಿಗೆ - ಯಾರು ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುತ್ತಾರೋ ಅವರೇ ನನಗೆ ತಾಯಿಯೂ ಸಹೋದರರು ಆಗಬೇಕು ಎಂದು ಉತ್ತರಕೊಟ್ಟನು.
22
ಒಂದಾನೊಂದು ದಿನದಲ್ಲಿ ಆತನು ತನ್ನ ಶಿಷ್ಯರ ಸಂಗಡ ಒಂದು ದೋಣಿಯನ್ನು ಹತ್ತಿ ಕೆರೆಯ ಆಚೇದಡಕ್ಕೆ ಹೋಗೋಣ ಎಂದು ಅವರಿಗೆ ಹೇಳಲು ಅವರು ದೋಣಿಯನ್ನು ನೀರಿನೊಳಗೆ ನೂಕಿ ಹೊರಟರು.
23
ಅವರು ಹೋಗುತ್ತಿರುವಾಗ ಆತನಿಗೆ ನಿದ್ರೆ ಹತ್ತಿತು; ಅಷ್ಟರಲ್ಲಿ ಬಿರುಗಾಳಿ ಕೆರೆಯ ಮೇಲೆ ಬರಲು ದೋಣಿಯೊಳಗೆ ನೀರು ತುಂಬಿಕೊಂಡದರಿಂದ ಅವರು ಅಪಾಯಕ್ಕೆ ಗುರಿಯಾದರು.
24
ಹೀಗಿರಲಾಗಿ ಅವರು ಆತನ ಹತ್ತಿರ ಬಂದು - ಗುರುವೇ, ಗುರುವೇ, ಸಾಯುತ್ತೇವೆ ಎಂದು ಹೇಳಿ ಆತನನ್ನು ಎಬ್ಬಿಸಿದರು. ಆಗ ಆತನು ಎದ್ದು ಗಾಳಿಯನ್ನೂ ಉಬ್ಬುವ ನೀರನ್ನೂ ಗದರಿಸಿದನು. ಗದರಿಸಲು ಅವು ನಿಂತವು, ಶಾಂತವಾಯಿತು.
25
ತರುವಾಯ ಆತನು - ನಿಮ್ಮ ನಂಬಿಕೆ ಎಲ್ಲಿ? ಎಂದು ಅವರನ್ನು ಕೇಳಿದನು. ಅವರಾದರೋ ಭಯಪಟ್ಟು - ಈತನು ಯಾರಿರಬಹುದು? ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ; ಅವು ಕೂಡ ಹೇಳಿದ ಹಾಗೆ ಕೇಳುತ್ತವಲ್ಲಾ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡು ಅತ್ಯಾಶ್ಚರ್ಯಪಟ್ಟರು.
26
ಆ ಮೇಲೆ ಅವರು ಗಲಿಲಾಯಕ್ಕೆ ಎದುರಾಗಿರುವ ಗೆರಸೇನರ ಸೀಮೆಗೆ ಮುಟ್ಟಿದರು.
27
ಆತನು ದಡಕ್ಕೆ ಇಳಿಯುತ್ತಲೇ ಆ ಊರಿನವನಾದ ಒಬ್ಬ ಮನುಷ್ಯನು ಆತನೆದುರಿಗೆ ಬಂದನು. ಅವನಿಗೆ ದೆವ್ವಗಳು ಹಿಡಿದಿದ್ದವು. ಬಹುಕಾಲದಿಂದ ಬಟ್ಟೆಯನ್ನೇ ಹಾಕಿಕೊಳ್ಳದೆ ಯಾವ ಮನೆಯಲ್ಲಿಯೂ ಇರದೆ ಸಮಾಧಿಯ ಗವಿಗಳಲ್ಲಿಯೇ ಇರುತ್ತಿದ್ದನು.
28
ಇವನು ಯೇಸುವನ್ನು ಕಂಡು ಆರ್ಭಟಿಸಿ ಆತನ ಮುಂದೆ ಬಿದ್ದು ಮಹಾಶಬ್ದದಿಂದ - ಯೇಸುವೇ, ಪರಾತ್ಪರನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ನನ್ನನ್ನು ಕಾಡಬೇಡವೆಂತ ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
29
ಯಾಕಂದರೆ - ಈ ಮನುಷ್ಯನನ್ನು ಬಿಟ್ಟುಹೋಗಬೇಕೆಂದು ಆತನು ಆ ದೆವ್ವಕ್ಕೆ ಅಪ್ಪಣೆಕೊಟ್ಟಿದ್ದನು. ಅದು ಬಹು ಕಾಲದಿಂದ ಅವನನ್ನು ಹಿಡಿದಿತ್ತು; ಇದಲ್ಲದೆ ಅವನನ್ನು ಕಾವಲಲ್ಲಿಟ್ಟು ಸರಪಣಿಗಳಿಂದಲೂ ಬೇಡಿಗಳಿಂದಲೂ ಕಟ್ಟಿದ್ದರೂ ಅವನು ಆ ಬಂಧಗಳನ್ನು ಮುರಿದುಹಾಕುತ್ತಿದ್ದನು; ಮತ್ತು ಆ ದೆವ್ವ ಅವನನ್ನು ಅರಣ್ಯಪ್ರದೇಶಗಳಿಗೆ ಓಡಿಸುತ್ತಿತ್ತು.
30
ಯೇಸು - ನಿನ್ನ ಹೆಸರೇನೆಂದು ಅವನನ್ನು ಕೇಳಿದ್ದಕ್ಕೆ ಅವನು - ನನ್ನ ಹೆಸರು ದಂಡು ಅಂದನು; ಯಾಕಂದರೆ ಬಹಳ ದೆವ್ವಗಳು ಅವನೊಳಗೆ ಹೊಕ್ಕಿದ್ದವು.
31
ಪಾತಾಳಕ್ಕೆ ಹೋಗಿಬಿಡುವಂತೆ ನಮಗೆ ಆಜ್ಞೆ ಮಾಡಬೇಡವೆಂದು ಅವು ಆತನನ್ನು ಬೇಡಿಕೊಂಡವು.
32
ಅಲ್ಲಿಯ ಗುಡ್ಡದಲ್ಲಿ ಬಹಳ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. ಆ ದೆವ್ವಗಳು - ಆ ಹಂದಿಗಳೊಳಗೆ ಸೇರಿಕೊಳ್ಳುವದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಆತನನ್ನು ಬೇಡಿಕೊಂಡವು.
33
ಆತನು ಆಗಲಿ ಎಂದು ಅವುಗಳಿಗೆ ಅಪ್ಪಣೆ ಕೊಡಲು ದೆವ್ವಗಳು ಆ ಮನುಷ್ಯನೊಳಗಿಂದ ಹೊರಗೆ ಬಂದು ಹಂದಿಗಳೊಳಗೆ ಹೊಕ್ಕವು; ಆ ಗುಂಪು ಓಡಿ ಕಡಿದಾದ ಸ್ಥಳದಿಂದ ಕೆರೆಯೊಳಗೆ ಬಿದ್ದು ಉಸುರುಕಟ್ಟಿ ಸತ್ತಿತು.
34
ಮೇಯಿಸುವವರು ನಡೆದದ್ದನ್ನು ಕಂಡು ಓಡಿಹೋಗಿ ಆ ಊರಲ್ಲಿಯೂ ಹಳ್ಳಿಗಳಲ್ಲಿಯೂ ಅದನ್ನು ತಿಳಿಸಲು
35
ಜನರು ನಡೆದ ಸಂಗತಿಯನ್ನು ನೋಡುವದಕ್ಕೆ ಹೊರಟು ಯೇಸುವಿದ್ದಲ್ಲಿಗೆ ಬಂದು ದೆವ್ವಗಳು ಬಿಟ್ಟುಹೋಗಿದ್ದ ಆ ಮನುಷ್ಯನು ಬಟ್ಟೆಗಳನ್ನು ಹಾಕಿಕೊಂಡು ಸ್ವಸ್ಥಬುದ್ಧಿಯಿಂದ ಯೇಸುವಿನ ಪಾದಗಳ ಬಳಿಯಲ್ಲಿ ಕೂತಿರುವದನ್ನು ಕಂಡು ಹೆದರಿದರು.
36
ನಡೆದ ಸಂಗತಿಯನ್ನು ನೋಡಿದ್ದವರು ಆ ದೆವ್ವಹಿಡಿದಿದ್ದವನಿಗೆ ಬಿಡುಗಡೆಯಾದ ರೀತಿಯನ್ನು ಅವರಿಗೆ ತಿಳಿಸಲು
37
ಗೆರಸೇನರ ಸುತ್ತಲಿರುವ ಸೀಮೆಯವರಿಗೆಲ್ಲಾ ಮಹಾ ಭಯಹಿಡಿದದ್ದರಿಂದ ಅವರು ಯೇಸುವನ್ನು - ನೀನು ನಮ್ಮನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.
38
ಆತನು ದೋಣಿಯನ್ನು ಹತ್ತಿ ಹಿಂತಿರುಗಿ ಹೋದನು. ಹೊರಡುವಾಗ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನು - ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆ ಎಂದು ಆತನನ್ನು ಬೇಡಿಕೊಂಡಾಗ
39
ಆತನು - ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ವಿವರವಾಗಿ ಹೇಳು ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.
40
ಯೇಸು ಹಿಂತಿರುಗಿ ಬಂದಾಗ ಜನರೆಲ್ಲರೂ ಆತನನ್ನು ಕಾದುಕೊಂಡಿದ್ದು ಸಂತೋಷದಿಂದ ಸ್ವೀಕರಿಸಿದರು.
41
ಆಗ ಸಭಾಮಂದಿರದ ಅಧಿಕಾರಿಯಾದ ಯಾಯೀರನೆಂಬ ಒಬ್ಬ ಮನುಷ್ಯನು ಬಂದು ಯೇಸುವಿನ ಪಾದಗಳಿಗೆ ಬಿದ್ದನು. ಹೆಚ್ಚು ಕಡಿಮೆ ಹನ್ನೆರಡು ವರುಷದವಳಾದ ಅವನ ಒಬ್ಬಳೇ ಮಗಳು ಸಾಯುವವಳಾಗಿದ್ದ ಕಾರಣ ಆತನನ್ನು ತನ್ನ ಮನೆಗೆ ಬರಬೇಕೆಂದು ಬೇಡಿಕೊಂಡನು. ಆತನು ಹೋಗುತ್ತಿರುವಲ್ಲಿ ಜನರು ಗುಂಪುಗುಂಪಾಗಿ ಆತನನ್ನು ಇರಿಕಿಸುತ್ತಿದ್ದರು.
43
ಆಗ ಹನ್ನೆರಡು ವರುಷದಿಂದ ರಕ್ತಕುಸುಮ ರೋಗವಿದ್ದ ಒಬ್ಬ ಹೆಂಗಸು ಬಂದಳು.
44
ಆಕೆಯು ಒಬ್ಬರಿಂದಲೂ ಗುಣ ಹೊಂದಲಾರದೆ ಇದ್ದಳು. ಆಕೆಯು ಹಿಂದಿನಿಂದ ಬಂದು ಆತನ ಉಡುಪಿನ ಗೊಂಡೆಯನ್ನು ಮುಟ್ಟಿದಳು; ಮುಟ್ಟುತ್ತಲೇ ಆಕೆಗೆ ರಕ್ತ ಹರಿಯುವದು ನಿಂತಿತು.
45
ಆಗ ಯೇಸು - ನನ್ನನ್ನು ಮುಟ್ಟಿದವರಾರು ಎಂದು ಕೇಳಿದನು. ಎಲ್ಲರು - ನಾನಲ್ಲ ನಾನಲ್ಲ ಅನ್ನಲು ಪೇತ್ರನು - ಗುರುವೇ ಎಷ್ಟೋ ಜನರು ನಿನ್ನನ್ನು ಒತ್ತೊತ್ತಿ ಮೈ ಮೇಲೆ ಬೀಳುತ್ತಿದ್ದಾರಲ್ಲಾ ಅಂದನು.
46
ಆದರೆ ಯೇಸು - ಯಾರೋ ಒಬ್ಬರು ನನ್ನನ್ನು ಮುಟ್ಟಿದರು; ನನ್ನಿಂದ ಶಕ್ತಿಯು ಹೊರಟಿತೆಂಬದು ನನಗೆ ಗೊತ್ತಾಯಿತು ಅಂದಾಗ
47
ಆ ಹೆಂಗಸು ತಾನು ಮರೆಯಾಗಿಲ್ಲವೆಂತ ತಿಳಿದು ನಡುಗುತ್ತಾ ಬಂದು ಆತನಿಗೆ ಅಡ್ಡ ಬಿದ್ದು ತಾನು ಇಂಥ ಕಾರಣದಿಂದ ಈತನನ್ನು ಮುಟ್ಟಿದೆನೆಂತಲೂ ಮುಟ್ಟಿದ ಕೂಡಲೆ ತನಗೆ ವಾಸಿಯಾಯಿತೆಂತಲೂ ಎಲ್ಲಾ ಜನರ ಮುಂದೆ ತಿಳಿಸಿದಳು.
48
ಆತನು ಆಕೆಗೆ - ಮಗಳೇ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು ಎಂದು ಹೇಳಿದನು.
49
ಆತನು ಇನ್ನೂ ಮಾತಾಡುತ್ತಿರುವಲ್ಲಿ ಸಭಾಮಂದಿರದ ಅಧಿಕಾರಿಯ ಕಡೆಯವನೊಬ್ಬನು ಬಂದು - ನಿನ್ನ ಮಗಳು ಸತ್ತಳು; ಗುರುವಿಗೆ ತೊಂದರೆ ಕೊಡಬೇಡ ಅಂದನು.
50
ಆದರೆ ಯೇಸು ಅದನ್ನು ಕೇಳಿ ಅವನಿಗೆ - ಅಂಜಬೇಡ, ನಂಬಿಕೆ ಮಾತ್ರ ಇರಲಿ, ಆಕೆ ಬದುಕುವಳು ಎಂದು ಉತ್ತರಕೊಟ್ಟನು.
51
ತರುವಾಯ ಆತನು ಆ ಮನೆಗೆ ಹೋಗಿ ಪೇತ್ರನು ಯೋಹಾನನು ಯಾಕೋಬನು ಆ ಹುಡುಗಿಯ ತಂದೆತಾಯಿಗಳು ಇಷ್ಟು ಮಂದಿಯನ್ನೇ ಹೊರತು ಬೇರೆ ಯಾರನ್ನೂ ತನ್ನ ಸಂಗಡ ಒಳಕ್ಕೆ ಬರಗೊಡಲಿಲ್ಲ.
52
ಎಲ್ಲರು ಅಳುತ್ತಾ ಆಕೆಗೋಸ್ಕರ ಎದೆಬಡುಕೊಳ್ಳುತ್ತಾ ಇದ್ದರು. ಯೇಸು - ಅಳಬೇಡಿರಿ, ಆಕೆ ಸತ್ತಿಲ್ಲ, ನಿದ್ದೆಮಾಡುತ್ತಾಳೆ ಅನ್ನಲಾಗಿ
53
ಜನರು ಆಕೆ ಸತ್ತಳೆಂದು ತಿಳಿದುಕೊಂಡದರಿಂದ ಆತನನ್ನು ಹಾಸ್ಯಮಾಡಿದರು.
54
ಆದರೆ ಆತನು ಆಕೆಯ ಕೈ ಹಿಡಿದು - ಅಮ್ಮಣ್ಣೀ, ಏಳು ಎಂದು ಕೂಗಿದನು.
55
ಆಕೆಯ ಪ್ರಾಣ ತಿರಿಗಿ ಬಂದು ತಕ್ಷಣವೇ ಆಕೆ ಎದ್ದಳು. ತರುವಾಯ ಆತನು - ಈಕೆಗೆ ಊಟಮಾಡಿಸಿರಿ ಎಂದು ಅಪ್ಪಣೆ ಕೊಟ್ಟನು.
56
ಆಕೆಯ ತಂದೆತಾಯಿಗಳು ಬೆರಗಾದರು. ಆತನು - ಈ ನಡೆದ ಸಂಗತಿಯನ್ನು ಯಾರಿಗೂ ತಿಳಿಸಬೇಡಿರೆಂದು ಖಂಡಿತವಾಗಿ ಹೇಳಿದನು.
← Chapter 7
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 9 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24