bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
/
Mark 15
Mark 15
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 16 →
1
ಬೆಳಗಾದ ಕೂಡಲೆ ಮುಖ್ಯಯಾಜಕರೂ, ಹಿರಿಯರೂ, ಶಾಸ್ತ್ರಿಗಳೂ, ಹಿರೀಸಭೆಯ ಸದಸ್ಯರೆಲ್ಲರೂ ಒಟ್ಟುಗೂಡಿ ಆಲೋಚನೆ ಮಾಡಿಕೊಂಡು ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು.
2
ಪಿಲಾತನು ಆತನನ್ನು, “ನೀನು ಯೆಹೂದ್ಯರ ಅರಸನೋ” ಎಂದು ಕೇಳಲು ಆತನು, “ನೀನೇ ಹೇಳಿದ್ದೀ” ಎಂದು ಉತ್ತರಕೊಟ್ಟನು.
3
ಮುಖ್ಯಯಾಜಕರು ಆತನ ಮೇಲೆ ತುಂಬಾ ದೂರು ಹೇಳುತ್ತಿದ್ದರು.
4
ಆಗ ಪಿಲಾತನು ಪುನಃ ಯೇಸುವನ್ನು, “ನೀನು ಏನೂ ಉತ್ತರಕೊಡುವುದಿಲ್ಲವೇ? ಇವರು ನಿನ್ನ ಮೇಲೆ ತುಂಬಾ ದೂರುಗಳನ್ನು ಹೇಳುತ್ತಿದ್ದಾರೆ ನೋಡು” ಎಂದು ಹೇಳಿದನು.
5
ಆದರೆ ಯೇಸು ಏನೂ ಉತ್ತರಕೊಡಲಿಲ್ಲ. ಅದನ್ನು ನೋಡಿ ಪಿಲಾತನು ಆಶ್ಚರ್ಯಪಟ್ಟನು.
6
ಪ್ರತಿ ಪಸ್ಕಹಬ್ಬದಲ್ಲಿ ಜನರು ಬೇಡಿದ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಅಧಿಕಾರಕ್ಕೆ ಸೇರಿದ ಪದ್ಧತಿಯಾಗಿತ್ತು.
7
ಅಲ್ಲಿ ಬರಬ್ಬನೆಂಬುವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆ ಮಾಡಿದ ದಂಗೆಗಾರರೊಂದಿಗೆ ಬಂಧಿಸಿದ್ದರು.
8
ಜನರು ಪಿಲಾತನ ಬಳಿಗೆ ಹೋಗಿ, ನೀನು ನಮಗೆ ಮಾಡುತ್ತಾ ಬಂದ ಪದ್ಧತಿಯ ಪ್ರಕಾರ ಮಾಡು ಎಂದು ಕೇಳಿಕೊಳ್ಳುತ್ತಿದ್ದರು.
9
ಮುಖ್ಯಯಾಜಕರು ಅಸೂಯೆಯಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು, “ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತಿರೋ?” ಎಂದು ಅವರನ್ನು ಕೇಳಿದನು.
11
ಆದರೆ ಮುಖ್ಯಯಾಜಕರು, ಬರಬ್ಬನನ್ನೇ ಬಿಟ್ಟುಕೊಡಬೇಕೆಂದು ಬೇಡಿಕೊಳ್ಳಿರಿ ಎಂಬುದಾಗಿ ಜನರನ್ನು ಪ್ರೇರೇಪಿಸಿದರು.
12
ಅದಕ್ಕೆ ಪಿಲಾತನು ತಿರುಗಿ ಅವರನ್ನು, “ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ?” ಎಂದು ಕೇಳಿದನು.
13
ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು.
14
ಪಿಲಾತನು, “ಏಕೆ? ಇವನು ಏನು ಅಪರಾಧ ಮಾಡಿದ್ದಾನೆ?” ಅಂದನು. ಆದರೆ ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು.
15
ಅದಕ್ಕೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.
16
ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಯ ಅಂಗಳದೊಳಗೆ ಕರೆದುಕೊಂಡು ಹೋಗಿ, ತಮ್ಮ ಪಡೆಯನ್ನೆಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡರು.
17
ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು.
18
ಅನಂತರ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಆತನಿಗೆ ಅಪಹಾಸ್ಯಮಾಡಿ ವಂದಿಸಿದರು.
19
ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು.
20
ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.
21
ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಒತ್ತಾಯಪಡಿಸಿದರು. ಅವನು ಯಾರೆಂದರೆ, ಅಲೆಕ್ಸಾಂದ್ರ ಹಾಗೂ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು.
22
ಬಳಿಕ ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ “ತಲೆಬುರುಡೆಗಳು ಇರುವ ಸ್ಥಳ” ಎಂದರ್ಥ.
23
ಅಲ್ಲಿ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ.
24
ಅವರು ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಕೊಂಡರು.
25
ಆತನನ್ನು ಶಿಲುಬೆಗೆ ಹಾಕುವಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.
26
“ಈತನು ಯೆಹೂದ್ಯರ ಅರಸನು” ಎಂದು ಆತನ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ಶಿಲುಬೆಯ ಮೇಲೆ ಬರೆಯಲಾಗಿತ್ತು.
27
ಅದಲ್ಲದೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಯಲ್ಲಿ ಮತ್ತೊಬ್ಬನನ್ನು ಎಡಗಡೆಯಲ್ಲಿ ಆತನ ಸಂಗಡ ಶಿಲುಬೆಗೆ ಹಾಕಿದರು.
28
ಆತನು ಅಧರ್ಮಿಗಳ ಸಂಗಡ ಎಣಿಸಲ್ಪಟ್ಟನು ಎಂಬ ಶಾಸ್ತ್ರವಚನವು ಹೀಗೆ ನೆರವೇರಿತು. ಅಲ್ಲಿ ಹಾದುಹೋಗುವವರು ತಲೆ ಆಲ್ಲಾಡಿಸಿ “ಆಹಾ, ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಪುನಃ ಕಟ್ಟುವವನೇ,
30
ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು.
31
ಅದೇ ಮೇರೆಗೆ ಮುಖ್ಯಯಾಜಕರೂ ಶಾಸ್ತ್ರಿಗಳೂ, “ಅವನು ಮತ್ತೊಬ್ಬರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.
32
ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.
33
ಹನ್ನೆರಡು ಗಂಟೆಯಿಂದ ಮೂರು ಗಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
34
ಮೂರು ಗಂಟೆಗೆ ಯೇಸು, “ಎಲೋಹಿ, ಎಲೋಹಿ, ಲಮಾಸಬಕ್ತಾನೀ?” ಅಂದರೆ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿದನು.
35
ಹತ್ತಿರ ನಿಂತಿದ್ದವರಲ್ಲಿ ಕೆಲವರು ಅದನ್ನು ಕೇಳಿ, “ನೋಡಿರಿ, ಆತನು ಎಲೀಯನನ್ನು ಕರೆಯುತ್ತಾನೆ” ಅಂದರು.
36
ಆಗ ಒಬ್ಬನು ಓಡಿಹೋಗಿ ಸ್ಪಂಜಿನಿಂದ ಹುಳಿ ದ್ರಾಕ್ಷಾರಸವನ್ನು ತುಂಬಿ ಕೋಲಿನ ತುದಿಗೆ ಸಿಕ್ಕಿಸಿ, “ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ಏನೋ ಕಾದು ನೋಡೋಣ” ಎಂದು ಹೇಳಿ ಅದನ್ನು ಕುಡಿಯುವುದಕ್ಕೆ ಆತನಿಗೆ ಕೊಟ್ಟನು.
37
ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು.
38
ಆಗ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.
39
ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರಿಗೆ ನಿಂತು ನೋಡುತ್ತಿದ್ದ ಶತಾಧಿಪತಿಯು, “ನಿಜವಾಗಿ ಈ ಮನುಷ್ಯನು ದೇವಕುಮಾರನೇ” ಅಂದನು.
40
ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆಮಾಡುತ್ತಿದ್ದವರಾದ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯನ ತಾಯಿಯಾದ ಮರಿಯಳು, ಸಲೋಮೆ ಎಂಬುವರು ಹಾಗೂ ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಇದ್ದರು.
42
ಆಗಲೇ ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು.
43
ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು.
44
ಪಿಲಾತನು, ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರೆಸಿ, ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿದನು.
45
ಆತನು ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು.
46
ಯೋಸೇಫನು ನಾರುಮಡಿಯನ್ನು ಕೊಂಡುತಂದು ಯೇಸುವನ್ನು ಶಿಲುಬೆಯಿಂದ ಇಳಿಸಿ ನಾರುಮಡಿಯಲ್ಲಿ ಸುತ್ತಿ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
47
ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.
← Chapter 14
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 16 →
All chapters:
1
2
3
4
5
6
7
8
9
10
11
12
13
14
15
16