bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Daniel 11
Daniel 11
Kannada Bible (KNCL) BSI 2016
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 12 →
1
“ಮೇದ್ಯನಾದ ದಾರ್ಯಾವೆಷನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ನಾನೇ ಮಿಕಾಯೇಲನಿಗೆ ಬೆಂಬಲಕೊಟ್ಟು ಆಶ್ರಯನಾಗಿ ನಿಂತೆ.
2
“ಈಗ ಸತ್ಯಾಂಶವನ್ನು ತಿಳಿಸುತ್ತೇನೆ, ಕೇಳು: ಪರ್ಷಿಯ ದೇಶದಲ್ಲಿ ಇನ್ನೂ ಮೂವರು ರಾಜರು ಏಳುವರು. ನಾಲ್ಕನೆಯ ರಾಜನು ಎಲ್ಲರಿಗಿಂತಲೂ ಅಧಿಕ ಧನವಂತನಾಗಿರುವನು. ಅವನು ತನ್ನ ಧನದಿಂದ ಪ್ರಬಲನಾಗಿ ಗ್ರೀಕ್ ರಾಜ್ಯಕ್ಕೆ ವಿರುದ್ಧ ತನ್ನ ಬಲವನ್ನೆಲ್ಲ ಪ್ರಯೋಗಿಸುವನು.
3
“ಅನಂತರ ಪರಾಕ್ರಮಶಾಲಿಯಾದ ಒಬ್ಬ ರಾಜನು ಎದ್ದು ಮಹಾಪ್ರಭುತ್ವದಿಂದ ಆಳುತ್ತಾ ತನ್ನ ಇಷ್ಟಾರ್ಥಗಳನ್ನು ಸಾಧಿಸಿಕೊಳ್ಳುವನು.
4
ಆದರೆ ಅವನು ತಲೆಯೆತ್ತಿದ ಮೇಲೆ ಅವನ ರಾಜ್ಯ ಒಡೆದು ನಾಲ್ಕು ದಿಕ್ಕುಗಳಿಗೂ ಸೀಳಿಹೋಗುವುದು. ಅದು ಅವನ ಸಂತತಿಗೆ ಭಾಗವಾಗದು. ಅವನ ಆಳ್ವಿಕೆಯಲ್ಲಿ ಪ್ರಬಲವಾಗಿ ಇದ್ದಂತೆ ಅದು ಇನ್ನು ಪ್ರಬಲವಾಗದು.
5
“ದಕ್ಷಿಣ ದಿಕ್ಕಿನ ರಾಜನು ಮತ್ತು ಅವನ ದಳವಾಯಿಗಳಲ್ಲಿ ಒಬ್ಬನು ಶಕ್ತಿಶಾಲಿಗಳಾಗುವರು. ದಳವಾಯಿ ರಾಜನಿಗಿಂತ ಶಕ್ತಿಶಾಲಿಯಾಗಿ ಪ್ರಭುತ್ವಕ್ಕೆ ಬರುವನು. ಅವನ ರಾಜ್ಯ ದೊಡ್ಡ ರಾಜ್ಯವಾಗುವುದು.
6
ಕೆಲವು ವರ್ಷಗಳಾದ ಮೇಲೆ ಅವರು ಒಪ್ಪಂದ ಮಾಡಿಕೊಳ್ಳುವರು. ಇದನ್ನು ದೃಢಪಡಿಸಿಕೊಳ್ಳಲು ಆ ದಕ್ಷಿಣ ರಾಜನ ಕುಮಾರಿ ಉತ್ತರ ದಿಕ್ಕಿನ ರಾಜನನ್ನು ಸೇರುವಳು. ಆದರೂ ತನ್ನ ಸಂಬಂಧವನ್ನು ಉಳಿಸಿಕೊಳ್ಳನು. ಅವನೂ ಅವನ ಸಂತಾನವೂ ನಿಲ್ಲವು. ಅವಳು, ಅವಳನ್ನು ಕರೆತಂದವರು, ಪಡೆದವನು, ಕರೆದುಕೊಂಡವನು ಇವರೆಲ್ಲರೂ ಅಂದು ನಾಶಕ್ಕೀಡಾಗುವರು.
7
ಅನಂತರ ಅವಳು ಹುಟ್ಟಿದ ಬುಡದಿಂದ ಒಡೆದ ಸಸಿಯೊಂದು ಅದರ ಸ್ಥಾನದಲ್ಲಿ ನಿಲ್ಲುವುದು. ಉತ್ತರರಾಜನ ಸೈನ್ಯಕ್ಕೆ ವಿರುದ್ಧವಾಗಿ ಹೊರಟು, ಅವನ ದುರ್ಗದೊಳಗೆ ನುಗ್ಗಿ, ಅಲ್ಲಿನವರಿಗೆ ಮಾಡುವಷ್ಟೂ ಮಾಡಿ ಗೆಲ್ಲುವನು.
8
ಅವರ ದೇವರುಗಳನ್ನೂ ಎರಕದ ಬೊಂಬೆಗಳನ್ನೂ ಒಳ್ಳೊಳ್ಳೆ ಬೆಳ್ಳಿಬಂಗಾರದ ಪಾತ್ರೆಗಳನ್ನೂ ಸೂರೆಮಾಡಿಕೊಂಡು ಈಜಿಪ್ಟಿಗೆ ಹಿಂದಿರುಗುವನು. ಕೆಲವು ವರ್ಷಗಳ ತನಕ ಉತ್ತರರಾಜನ ಗೊಡವೆಗೆ ಹೋಗನು.
9
ಬಳಿಕ ಉತ್ತರರಾಜನು ದಕ್ಷಿಣರಾಜನ ರಾಜ್ಯದ ಮೇಲೆ ದಾಳಿಮಾಡುವನು. ಆದರೆ ಅವನು ಸ್ವದೇಶಕ್ಕೆ ಹಿಂದಿರುಗಬೇಕಾಗುವುದು.
10
ಆಮೇಲೆ ಉತ್ತರರಾಜನ ಮಕ್ಕಳು ಯುದ್ಧಸನ್ನಾಹ ಮಾಡಿ ಮಹಾವ್ಯೂಹವಾದ ದೊಡ್ಡ ಸೈನ್ಯವನ್ನು ಕೂಡಿಸುವರು. ಆ ಸೈನ್ಯ ಬೆಳೆದು ತುಂಬಿತುಳುಕುವ ಪ್ರವಾಹದಂತೆ ಹಬ್ಬಿಕೊಳ್ಳುವುದು. ಅವರು ಮತ್ತೆ ಯುದ್ಧಕ್ಕೆ ಹೊರಟು ದಕ್ಷಿಣರಾಜನ ದುರ್ಗದವರೆಗೆ ನುಗ್ಗುವರು.
11
ಆಗ ದಕ್ಷಿಣರಾಜನು ಕ್ರೋಧದಿಂದುರಿಯುತ್ತಾ ಹೊರಟುಬಂದು ಉತ್ತರರಾಜನ ಸಂಗಡ ಯುದ್ಧಮಾಡುವನು. ಉತ್ತರರಾಜನು ಮಹಾವ್ಯೂಹವನ್ನು ಕಟ್ಟಿದರೂ ಅದೆಲ್ಲವು ದಕ್ಷಿಣರಾಜನ ಕೈವಶವಾಗುವುದು.
12
ಇದರಿಂದಾಗಿ ಅವನು ಗರ್ವಿಷ್ಠನಾಗುವನು. ಲಕ್ಷಾಂತರ ಸೈನಿಕರನ್ನು ಸದೆಬಡಿದಿದ್ದರೂ ಪ್ರಾಬಲ್ಯಕ್ಕೆ ಬಾರನು.
13
“ತರುವಾಯ ಉತ್ತರರಾಜನು ಹಿಂದಿನ ದಂಡಿಗಿಂತ ದೊಡ್ಡ ದಂಡನ್ನು ಮತ್ತೆ ಕೂಡಿಸಿಕೊಂಡು ಬಹಳ ವರ್ಷಗಳು ಕಳೆದನಂತರ ಮಹಾಸೈನ್ಯ ಸಮೇತ ಅಧಿಕ ಸನ್ನಾಹದಿಂದ ಬರುವನು.
14
ಆ ಕಾಲದಲ್ಲಿ ಅನೇಕರು ದಕ್ಷಿಣರಾಜನಿಗೆ ಎದುರು ನಿಲ್ಲುವರು. ಇದಲ್ಲದೆ, ನಿನ್ನ ಸ್ವಂತಜನರಲ್ಲಿ ಹಿಂಸಾಪ್ರಿಯರು ಆ ದರ್ಶನವನ್ನು ನಿಜವಾಗಿಸಬೇಕೆಂದು ದಂಗೆ ಏಳುವರು. ಆದರೆ ಸೋತುಹೋಗುವರು.
15
ಉತ್ತರರಾಜನು ಬಂದು, ಮುತ್ತಿಗೆಹಾಕಿ, ಕೋಟೆಕೊತ್ತಲದ ನಗರವನ್ನು ಹಿಡಿಯುವನು. ದಕ್ಷಿಣದ ಭುಜಬಲವು ಅವನನ್ನು ನಿಲ್ಲಿಸಲಾರದು. ಅಲ್ಲಿನ ಮಹಾವೀರರು ತಡೆಯಲಾರರು. ಎದುರಿಸುವ ಯಾವ ಶಕ್ತಿಯೂ ಇರದು.
16
ದಕ್ಷಿಣದರಾಜನಿಗೆ ವಿರುದ್ಧ ಬರುವವನು ಇಚ್ಛಾನುಸಾರ ವರ್ತಿಸುವನು. ಅವನನ್ನು ಎದುರಿಸಬಲ್ಲವನು ಒಬ್ಬನೂ ಇರನು. ಆ ‘ಚೆಲುವಿನ ನಾಡನ್ನೂ’ ಗೆದ್ದು ಅದನ್ನು ಪೂರ್ತಿಯಾಗಿ ತನ್ನ ಕೈಹಿಡಿತದಲ್ಲಿ ಇಟ್ಟುಕೊಳ್ಳುವನು.
17
“ಉತ್ತರದ ರಾಜನು ದಕ್ಷಿಣರಾಜನ ಮೇಲೆ ಬೀಳಬೇಕೆಂದು ನಿರ್ಧರಿಸಿ ತನ್ನ ರಾಜ್ಯದ ಸಮಸ್ತ ಶಕ್ತಿಸಮೇತನಾಗಿ ಹೊರಟು ಅವನ ಸಂಗಡ ಒಪ್ಪಂದ ಮಾಡಿಕೊಳ್ಳುವನು. ಅವನ ರಾಜ್ಯದ ಹಾನಿಗಾಗಿಯೆ ಹೆಣ್ಣನ್ನು ಕೊಡುವನು. ಆದರೆ ಈ ಉಪಾಯ ಫಲಿಸದು. ಅದರಿಂದ ತನಗೂ ಅನುಕೂಲವಾಗದು.
18
ಆಮೇಲೆ ಅವನು ಕರಾವಳಿಯ ನಾಡುಗಳ ಕಡೆಗೆ ಕಣ್ಣಿಟ್ಟು ಅಲ್ಲಿಯ ಅನೇಕ ನಾಡುಗಳನ್ನು ಆಕ್ರಮಿಸುವನು. ಆದರೆ ದಳವಾಯಿ ಒಬ್ಬನು ಅವನ ಅಟ್ಟಹಾಸವನ್ನು ತಡೆಗಟ್ಟುವನು. ಅವನು ಮಾಡುವ ಹಾನಿ ಅವನಿಗೇ ತಗಲುವಂತೆ ಮಾಡುವನು.
19
ಬಳಿಕ ರಾಜನು ಸ್ವದೇಶದ ದುರ್ಗಗಳ ಕಡೆಗೆ ಹಿಂದಿರುಗುವನು. ಆದರೆ ಎಡವಿಬಿದ್ದು ಅಳಿದುಹೋಗುವನು.
20
“ಅವನ ಸ್ಥಾನದಲ್ಲಿ ಮತ್ತೊಬ್ಬನು ರಾಜ್ಯವಾಳುವನು. ಇವನು ರಾಜ್ಯದಲ್ಲಿನ ಶಿರೋಮಣಿಯಂಥ ನಾಡನ್ನೆಲ್ಲ ದೋಚಿಕೊಳ್ಳಬಲ್ಲ ಉದ್ಯೋಗಿಯನ್ನು ನೇಮಿಸುವನು. ಆದರೆ ಕೆಲವೇ ದಿನಗಳಲ್ಲಿ ಅವನು ಕದನದಿಂದ ಅಲ್ಲ, ಕೋಪದಿಂದ ಅಲ್ಲ, ಹಾಗೆಯೇ ಮಡಿದುಹೋಗುವನು.
21
“ಅವನ ಸ್ಥಾನದಲ್ಲಿ ನೀಚನೊಬ್ಬನು ಏಳುವನು. ಅವನು ರಾಜಪದವಿಗೆ ಹಕ್ಕುದಾರನಲ್ಲ. ಆದರೂ ನೆಮ್ಮದಿಯ ಕಾಲದಲ್ಲಿ ನಯವಾದ ನುಡಿಗಳಿಂದ ರಾಜ್ಯವನ್ನು ಪಡೆದುಕೊಳ್ಳುವನು.
22
ಅವನನ್ನು ಎದುರಿಸುವ ದೊಡ್ಡ ದೊಡ್ಡ ಸೈನ್ಯಗಳು ಹಾಗು ದೇವರ ಪ್ರಧಾನ ಯಾಜಕನು ಅವನ ಸೈನ್ಯ ಪ್ರವಾಹಕ್ಕೆ ಸಿಕ್ಕಿ ಅದರಲ್ಲಿ ಮುಳುಗಿ ನಾಶವಾಗುವರು.
23
ಅವನ ಸಂಗಡ ಒಪ್ಪಂದ ಮಾಡಿಕೊಂಡವನಿಗೆ ಕೂಡಲೆ ಮೋಸಮಾಡುವನು. ಕೊಂಚ ಜನರ ಸಹಾಯದಿಂದಲೆ ಏಳಿಗೆಯಾಗಿ ಬಲಗೊಳ್ಳುವನು.
24
ನೆಮ್ಮದಿಯ ಕಾಲದಲ್ಲಿ ಸಂಸ್ಥಾನದ ಫಲವತ್ತಾದ ಪ್ರದೇಶಗಳ ಮೇಲೆ ದಾಳಿಮಾಡುವನು. ತಂದೆತಾತಂದಿರು ಮಾಡದಂಥ ಕಾರ್ಯಗಳನ್ನು ಮಾಡುವನು. ಸೂರೆ-ಸುಲಿಗೆ-ಕೊಳ್ಳೆಹೊಡೆದವುಗಳನ್ನು ತನ್ನವರಿಗೆ ಚೆಲ್ಲಿಬಿಡುವನು. ಕೋಟೆಗಳನ್ನು ಹಿಡಿಯುವ ಕುತಂತ್ರಗಳನ್ನು ಕೊನೆಯವರೆಗೂ ಮುಂದುವರೆಸುವನು.
25
“ಅವನು ಧೈರ್ಯತಂದುಕೊಂಡು, ದೊಡ್ಡ ದಂಡೆತ್ತಿ, ದಕ್ಷಿಣರಾಜನಿಗೆ ವಿರುದ್ಧ ತನ್ನ ರಾಜ್ಯದ ಶಕ್ತಿಯನ್ನೆಲ್ಲ ಕೂಡಿಸುವನು. ದಕ್ಷಿಣರಾಜನಾದರೋ ಅತ್ಯಧಿಕ ಬಲವುಳ್ಳ ಮಹಾಸೈನ್ಯ ಸಮೇತನಾಗಿ ಯುದ್ಧಕ್ಕೆ ಹೊರಡುವನು. ಆದರೆ ಜಯಗಳಿಸನು. ಕುಯುಕ್ತಿಗಳಿಗೆ ಗುರಿಯಾಗಿ ಸೋಲನ್ನು ಅಪ್ಪಬೇಕಾಗುವುದು.
26
ಅವನ ಮೃಷ್ಟಾನ್ನ ತಿಂದವರೇ ಅವನಿಗೆ ಎರಡು ಬಗೆಯುವರು. ಅವನ ಸೈನ್ಯವು ಕೊಚ್ಚಿಕೊಂಡುಹೋಗುವುದು. ಬಹುಜನರು ಹತರಾಗಿ ಬೀಳುವರು.
27
ಆ ಇಬ್ಬರು ರಾಜರು ಪರಸ್ಪರ ಕೇಡಿನ ಮನಸ್ಸು ಉಳ್ಳವರಾಗಿ ಸಹಪಂಕ್ತಿಯಲ್ಲಿ ಕುಳಿತಿದ್ದರೂ ಸುಳ್ಳುಪೊಳ್ಳು ಮಾತಾಡಿಕೊಳ್ಳುವರು. ಆದರೆ ನಿಶ್ಚಿತಕಾಲ ಬರುವ ತನಕ ಅವರಿಂದ ಏನೂ ಸಾಧಿಸಲಾಗದು.
28
ಅನಂತರ ಉತ್ತರದ ಆ ನೀಚರಾಜನು ಬಹು ಆಸ್ತಿಯನ್ನು ಕೊಳ್ಳೆಹೊಡೆದು ಸ್ವದೇಶಕ್ಕೆ ಹಿಂತಿರುಗುವನು. ಅವನ ಮನಸ್ಸು ಪವಿತ್ರ ಒಡಂಬಡಿಕೆಗೆ ವಿರುದ್ಧವಾಗಿರುವುದು. ಇಷ್ಟಬಂದ ಹಾಗೆ ವರ್ತಿಸಿ ಮತ್ತೆ ಸ್ವದೇಶವನ್ನು ಸೇರುವನು.
29
“ನಿಶ್ಚಿತ ಕಾಲದಲ್ಲಿ ಪುನಃ ದಕ್ಷಿಣದೇಶದ ಮೇಲೆ ದಾಳಿಮಾಡುವನು. ಆದರೆ ಮೊದಲು ಆದಂತೆಯೇ ಎರಡನೇಯ ಸಲ ಆಗದು.
30
ಅವನಿಗೆ ವಿರುದ್ಧವಾಗಿ ರೋಮಿನ ಹಡಗುಗಳು ಬರಲು ಅವನು ಎದೆಗುಂದಿ ಹಿಂದಿರುಗುವನು. ಪವಿತ್ರ ಒಡಂಬಡಿಕೆಯ ವಿರುದ್ಧ ಮತ್ಸರಗೊಂಡು ಸಾಧ್ಯವಾದಷ್ಟೂ ಹಾನಿಮಾಡುವನು. ಸ್ವದೇಶಕ್ಕೆ ಹಿಂದಿರುಗಿ ಪವಿತ್ರ ಒಡಂಬಡಿಕೆಯನ್ನು ತೊರೆದವರಿಗೆ ಆದರ ತೋರುವನು.
31
ಅವನು ಕೂಡಿಸುವ ಸೈನ್ಯವು ಆಶ್ರಯದುರ್ಗವಾದ ಪವಿತ್ರಾಲಯವನ್ನು ಹೊಲೆಗೆಡಿಸುವುದು. ಅನುದಿನದ ಬಲಿಯನ್ನು ನಿಲ್ಲಿಸುವುದು. ವಿನಾಶಕರ ವಿಕಟ ಮೂರ್ತಿಯನ್ನು ಪ್ರತಿಷ್ಠಾಪಿಸುವುದು.
32
ಒಡಂಬಡಿಕೆಯ ದ್ರೋಹಿಗಳು ಅವನ ನಯನುಡಿಗೆ ಮಾರುಹೋಗುವರು. ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು.
33
ಜನರಲ್ಲಿನ ಬುದ್ಧಿವಂತ ನಾಯಕರು ಅನೇಕರಿಗೆ ಬುದ್ಧಿಹೇಳುವರು. ಕೆಲಕಾಲ ಅವರು ಕತ್ತಿ-ಬೆಂಕಿ-ಸೆರೆ-ಸೂರೆಗಳಿಗೆ ತುತ್ತಾಗುವರು.
34
ಹೀಗಾಗುವಾಗ ಅವರಿಗೆ ಅಲ್ಪಸ್ವಲ್ಪ ಸಹಾಯ ದೊರೆಯುವುದು. ಆ ಬಳಿಕ ಬಹುಮಂದಿ ನಯನವಿರಾದ ಮಾತುಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.
35
ಅಂತ್ಯಕಾಲದವರೆಗೆ ಬುದ್ಧಿವಂತ ನಾಯಕರಲ್ಲಿ ಕೆಲವರು ಸಾವಿಗೆ ತುತ್ತಾಗುವರು. ಇದರಿಂದ ಜನರು ಶೋಧಿಸಲ್ಪಟ್ಟು, ಶುದ್ಧಿಹೊಂದಿ ಶುಭ್ರರಾಗುವರು. ಅಂತ್ಯವು ಕ್ಲುಪ್ತಕಾಲದಲ್ಲೇ ಬರುವುದು.
36
“(ಉತ್ತರದ) ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲ ದೇವರುಗಳಿಗಿಂತಲೂ ದೊಡ್ಡವನೆಂದು ತನ್ನನ್ನೇ ಹೆಚ್ಚಿಸಿಕೊಂಡು ಗರ್ವಿಷ್ಠನಾಗುವನು. ದೇವಾಧಿದೇವರನ್ನು ಅತಿಯಾಗಿ ದೂಷಿಸುವನು. ನಿಮ್ಮ ಮೇಲಿನ ದೈವಕೋಪ ತೀರುವ ತನಕ ಅವನು ವೃದ್ಧಿಯಾಗುವನು. ದೈವಸಂಕಲ್ಪ ನೆರವೇರಲೇಬೇಕು.
37
ಅವನು ತನ್ನ ಪೂರ್ವಜರ ದೇವರನ್ನಾಗಲಿ, ಮಹಿಳೆಯರು ಮೋಹಿಸುವ ದೇವರನ್ನಾಗಲಿ, ಯಾವ ದೇವರನ್ನೇ ಆಗಲಿ, ಲಕ್ಷಿಸನು. ಎಲ್ಲ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.
38
ಕುಲದೇವರಿಗೆ ಬದಲಾಗಿ ದುರ್ಗ ದೇವರನ್ನು ಘನಪಡಿಸುವನು. ಪೂರ್ವಜರಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯ ಕೊಡುಗೆಗಳಿಂದಲೂ ಗೌರವಿಸುವನು.
39
ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು. ತನಗೆ ಮೆಚ್ಚುಗೆಯಾದವರನ್ನು ಹೆಚ್ಚಾಗಿ ಸತ್ಕರಿಸುವನು. ಅವರನ್ನು ಬಹುಜನರ ಮೇಲೆ ಅಧಿಕಾರಿಗಳನ್ನಾಗಿ ನೇಮಿಸುವನು. ಹಣಕ್ಕಾಗಿ ದೇಶವನ್ನೇ ಹಂಚಿಬಿಡುವನು.
40
“ಅಂತ್ಯಕಾಲದಲ್ಲಿ ದಕ್ಷಿಣರಾಜನು ಉತ್ತರರಾಜನ ಮೇಲೆ ಬೀಳುವನು. ಆದರೆ ಉತ್ತರರಾಜನು ರಥಾಶ್ವಬಲಗಳಿಂದಲೂ ಬಹು ನಾವೆಗಳಿಂದಲೂ ಕೂಡಿದವನಾಗಿ ದಕ್ಷಿಣರಾಜನ ಮೇಲೆ ಧಾಳಿಮಾಡಿ ನಾಡುನಾಡುಗಳನ್ನು ನುಗ್ಗಿ, ಪ್ರವಾಹದಂತೆ ಹರಡಿಕೊಳ್ಳುವನು.
41
ಆ ‘ಚೆಲುವಿನ ನಾಡಿಗೂ’ ನುಗ್ಗುವನು. ಅನೇಕ ಸೀಮೆಗಳು ಅವನಿಂದ ನಾಶವಾಗುವುವು. ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು ಅವನ ಕೈಯಿಂದ ತಪ್ಪಿಸಿಕೊಳ್ಳುವರು.
42
ಬೇರೆ ದೇಶಗಳ ಮೇಲೂ ಕೈಮಾಡುವನು; ಈಜಿಪ್ಟ್ ದೇಶವು ಅವನ ಕೈಯಿಂದ ತಪ್ಪಿಸಿಕೊಳ್ಳದು.
43
ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನು ಹಾಗು ಈಜಿಪ್ಟಿನ ಒಳ್ಳೊಳ್ಳೆಯ ವಸ್ತುಗಳೆಲ್ಲವನ್ನು ವಶಮಾಡಿಕೊಳ್ಳುವನು. ಲಿಬ್ಯ ಮತ್ತು ಸುಡಾನಿನವರು ಅವನನ್ನು ಹಿಂಬಾಲಿಸುವರು.
44
ಹೀಗಿರಲು ಪೂರ್ವದಿಂದ ಮತ್ತು ಉತ್ತರದಿಂದ ಬರುವ ಸುದ್ದಿ ಅವನನ್ನು ಬಾಧಿಸುವುದು. ಅವನು ಅತಿರೋಷಗೊಂಡು ಬಹುಜನರನ್ನು ಧ್ವಂಸಿಸಿ ನಿರ್ನಾಮಮಾಡಲು ಹೊರಡುವನು.
45
ಕಡಲಿಗೂ ಚೆಲುವಿನ ಪರಿಶುದ್ಧ ಪರ್ವತಕ್ಕೂ ನಡುವೆ ಅರಮನೆಯಂಥ ಗುಡಾರವನ್ನು ಹಾಕಿಸುವನು. ಆದರೂ ಸಹಾಯಕ್ಕೆ ಯಾರೂ ಇಲ್ಲದವನಾಗಿ ಸಾಯುವನು.
← Chapter 10
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 12 →
All chapters:
1
2
3
4
5
6
7
8
9
10
11
12