bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Ecclesiastes 9
Ecclesiastes 9
Kannada Bible (KNCL) BSI 2016
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 10 →
1
ನಾನು ಇವೆಲ್ಲವನ್ನು ಪರ್ಯಾಲೋಚಿಸಿ ಇದನ್ನು ಮನಗಂಡೆ: ಸತ್ಪುರುಷರ ಹಾಗೂ ಸುಜ್ಞಾನಿಗಳ ಕಾರ್ಯಗಳೆಲ್ಲವೂ ದೇವರ ಕೈಯಲ್ಲಿವೆ. ತಾವು ಪ್ರೀತಿಗೆ ಪಾತ್ರರೋ ದ್ವೇಷಕ್ಕೆ ಅರ್ಹರೋ ಮಾನವರಿಗೆ ತಿಳಿಯದು. ಮುಂದೆ ಏನು ಕಾದಿದೆ ಎಂಬುದು ಯಾರಿಗೂ ಗೊತ್ತಿಲ್ಲ.
2
ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು; ಸಜ್ಜನನಿಗೂ ದುರ್ಜನನಿಗೂ, ಒಳ್ಳೆಯವನಿಗೂ (ಕೆಟ್ಟವನಿಗೂ), ಶುದ್ಧನಿಗೂ, ಅಶುದ್ಧನಿಗೂ ಬಲಿಯನ್ನರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿ ಕಾದಿದೆ; ನಿರ್ದೋಷಿಯಂತೆ ದೋಷಿಯೂ ಇರುವನು; ಆಣೆಯಿಡುವವನ ಹಾಗೆ ಆಣೆಗೆ ಅಂಜುವವನೂ ಇರುವನು.
3
ಎಲ್ಲರಿಗೂ ಒಂದೇ ಗತಿಯೆಂಬ ಸಂಕಟವು ಲೋಕ ವ್ಯವಹಾರಗಳಲ್ಲೆಲ್ಲಾ ಸೇರಿಕೊಂಡಿದೆ. ಇದಲ್ಲದೆ, ನರಮಾನವರ ಎದೆಯಲ್ಲಿ ಕೆಟ್ಟತನ ತುಂಬಿದೆ; ಅವರು ಬದುಕಿರುವ ತನಕ ಮರುಳುತನ ಅವರ ಮನಸ್ಸನ್ನು ಸೆರೆಹಿಡಿದಿರುತ್ತದೆ. ಅನಂತರ ಸತ್ತವರನ್ನು ಸೇರಿಕೊಳ್ಳುತ್ತಾರೆ.
4
ಜೀವಿತರ ಗುಂಪಿಗೆ ಸೇರಿದವನಿಗೆ ನಂಬಿಕೆ-ನಿರೀಕ್ಷೆಯುಂಟು; ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
5
ಜೀವಿತರಿಗೆ ಖಂಡಿತವಾಗಿ ಸಾಯುತ್ತೇವೆಂಬ ತಿಳುವಳಿಕೆಯಾದರೂ ಉಂಟು. ಸತ್ತವರಿಗಾದರೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಯಾವ ಪ್ರತಿಫಲವೂ ಇಲ್ಲ; ಅವರ ಹೆಸರನ್ನೂ ಜನರು ಮರೆತುಬಿಡುತ್ತಾರೆ.
6
ಅವರ ಪ್ರೀತಿ, ದ್ವೇಷ, ಮತ್ಸರ, ಅವರು ಸತ್ತಾಗಲೇ ಅಳಿದುಹೋಗುತ್ತವೆ. ಇಹಲೋಕದಲ್ಲಿ ನಡೆಯುವ ಯಾವುದರಲ್ಲೂ ಅವರಿಗೆ ಇನ್ನೆಂದಿಗೂ ಪಾಲಿರುವುದಿಲ್ಲ.
7
ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ತಿನ್ನು; ದ್ರಾಕ್ಷಾರಸವನ್ನು ಉಲ್ಲಾಸದಿಂದ ಕುಡಿ; ದೇವರು ನಿನ್ನ ನಡತೆಯನ್ನು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
8
ನಿನ್ನ ಬಟ್ಟೆಗಳು ಬೆಳ್ಳಗಿರಲಿ, ತಲೆಗೆ ಎಣ್ಣೆಯ ಕೊರತೆ ಇಲ್ಲದಿರಲಿ.
9
ಲೋಕದಲ್ಲಿ ದೇವರು ವಿಧಿಸಿರುವ ಈ ನಿರರ್ಥಕ ಜೀವಮಾನದ ನಿರರ್ಥಕ ದಿನದಿನವೂ ನಿನ್ನ ಪ್ರಿಯ ಪತ್ನಿಯೊಡನೆ ಸುಖದಿಂದ ಬದುಕು; ಇಹಲೋಕದ ನಿನ್ನ ಬಾಳಿನಲ್ಲಿ ನೀನು ಪಡುವ ಪಾಡಿಗೆ ಇದೇ ನಿನ್ನ ಪಾಲಿಗೆ ಬಂದ ಪಂಚಾಮೃತ.
10
ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲ ಪೂರ್ಣಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿಕ್ಕಿರುವ ಪಾತಾಳದಲ್ಲಿ ಯಾವ ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
11
ಲೋಕದಲ್ಲಿ ನಾನು ಇನ್ನೊಂದು ವಿಷಯವನ್ನು ಗಮನಿಸಿದೆ; ಓಟ ಪಂದ್ಯದಲ್ಲಿ ವೇಗವಾಗಿ ಓಡುವವನೇ ಯಾವಾಗಲೂ ಗೆಲ್ಲುವನು ಎನ್ನುವಂತಿಲ್ಲ; ಬಲಿಷ್ಠರಿಗೇ ಯುದ್ಧದಲ್ಲಿ ಜಯಗಿಟ್ಟುತ್ತದೆ ಎನ್ನುವಹಾಗಿಲ್ಲ. ಜ್ಞಾನಿಗೆ ಜೀವನಾಂಶ ದೊರಕುವುದು, ಜಾಣನಿಗೆ ಹಣ ಲಭಿಸುವುದು, ಪ್ರವೀಣನಿಗೆ ಪಟ್ಟಪದವಿ ಸಿಕ್ಕುವುದು ಎನ್ನುವಂತಿಲ್ಲ. ಇವರೆಲ್ಲರೂ ಸಮಯ ಸಂದರ್ಭಗಳಿಗೆ ಒಳಪಟ್ಟಿರುತ್ತಾರೆ.
12
ತನ್ನ ನಿಶ್ಚಿತಕಾಲ ಯಾವಾಗ ಬರುವುದೆಂದು ಮಾನವನಿಗೆ ತಿಳಿಯದು. ಮೀನುಗಳು ಮೋಸಬಲೆಗೂ, ಹಕ್ಕಿಗಳು ಉರುಲುಬಲೆಗೂ, ಸಿಕ್ಕಿ ಬೀಳುವಂತೆ ನರಮಾನವರು ತಮ್ಮ ಮೇಲೆ ತಟ್ಟನೆ ಬೀಳುವ ಕಾಲಪಾಶಕ್ಕೆ ಸಿಕ್ಕಿಕೊಳ್ಳುತ್ತಾರೆ.
13
ಲೋಕದಲ್ಲಿ ನಾನು ಜ್ಞಾನವನ್ನು ಈ ವಿಧವಾಗಿ ಮನಗಂಡೆ; ಅದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
14
ಇಗೋ, ಒಂದು ಚಿಕ್ಕ ಪಟ್ಟಣ. ಅದರಲ್ಲಿ ಕೆಲವೇ ನಿವಾಸಿಗಳು. ಬಲಿಷ್ಠವಾದ ಅರಸ ಅದಕ್ಕೆ ಮುತ್ತಿಗೆಹಾಕಿದ. ಅದರ ಸುತ್ತಲು ದೊಡ್ಡ ಕೋಟೆ ಎಬ್ಬಿಸಿದ.
15
ಆಗ ಅಲ್ಲಿದ್ದವರು ತಮ್ಮಲ್ಲೇ ಒಬ್ಬ. ಜ್ಞಾನಿಯನ್ನು ಕಂಡುಹಿಡಿದರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದ. ಆದರೆ ಆ ಬಡಜ್ಞಾನಿಯನ್ನು ಆಮೇಲೆ ಯಾರೂ ಸ್ಮರಿಸಲಿಲ್ಲ.
16
ಇದನ್ನು ನೋಡಿದ ನಾನು, ಶಕ್ತಿಗಿಂತ ಜ್ಞಾನವೇ ಶ್ರೇಷ್ಠ; ಆದರೆ ಜನರು ಆ ಬಡವನ ಜ್ಞಾನವನ್ನು ತಾತ್ಸಾರ ಮಾಡುತ್ತಾರೆ, ಅವನ ಮಾತುಗಳನ್ನು ಗಮನಿಸುವುದಿಲ್ಲ, ಎಂದುಕೊಂಡೆ.
17
ಹುಚ್ಚರ ಕೂಟದಲ್ಲಿ ಕೇಳಿಬರುವ ಅಧ್ಯಕ್ಷನ ಕೂಗಾಟಕ್ಕಿಂತ ಜ್ಞಾನಿಯ ಮೆಲ್ಲನೆಯ ಮಾತು ಕಿವಿಗೆ ಲೇಸು.
18
ಯುದ್ಧಾಯುಧಗಳಿಗಿಂತ ಜ್ಞಾನವೇ ಉತ್ತಮ; ಆದರೆ ಒಬ್ಬನೇ ಒಬ್ಬ ಪಾಪಿ ಸಾಕು ಪುಣ್ಯಕೋಟೆಯನ್ನು ಹಾಳುಮಾಡಲು!
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 10 →
All chapters:
1
2
3
4
5
6
7
8
9
10
11
12