bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Joel 1
Joel 1
Kannada Bible (KNCL) BSI 2016
Jump to:
Chapter 1
Chapter 2
Chapter 3
Chapter 2 →
1
ಪೆತುವೇಲನ ಮಗನಾದ ಯೊವೇಲನಿಗೆ ಸರ್ವೇಶ್ವರಸ್ವಾಮಿಯಿಂದ ಬಂದ ವಾಣಿ:
2
ವೃದ್ಧರೇ ಕೇಳಿ: ನಾಡಿನ ನಿವಾಸಿಗಳೇ ಕಿವಿಗೊಡಿ. ನಿಮ್ಮ ಕಾಲದಲ್ಲಾಗಲೀ ನಿಮ್ಮ ಪೂರ್ವಿಕರ ಕಾಲದಲ್ಲಾಗಲೀ, ಇಂಥ ದುರ್ಘಟನೆ ಸಂಭವಿಸಿದ್ದುಂಟೇ?
3
ಇದನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ; ಅವರು ತಮ್ಮ ಮಕ್ಕಳಿಗೆ ತಿಳಿಸಲಿ; ಅವರ ಮಕ್ಕಳು ಮುಂದಿನ ತಲೆಮಾರಿಗೆ ತಿಳಿಸಲಿ.
4
ಚೂರಿಮಿಡತೆ ತಿಂದು ಉಳಿದಿದ್ದ ಬೆಳೆಯನ್ನು ಗುಂಪುಮಿಡತೆ ತಿಂದುಬಿಟ್ಟಿತು. ಗುಂಪುಮಿಡತೆ ತಿಂದುಬಿಟ್ಟಿದ್ದನ್ನು ಕುದುರೆಮಿಡತೆ ತಿಂದುಬಿಟ್ಟಿತು; ಕುದುರೆಮಿಡತೆ ಬಿಟ್ಟದ್ದನ್ನು ಕಂಬಳಿಮಿಡತೆ ತಿಂದುಬಿಟ್ಟಿತು.
5
ಅಮಲೇರಿದವರೇ, ಎಚ್ಚರಗೊಳ್ಳಿ; ಅತ್ತು ಪ್ರಲಾಪಿಸಿರಿ; ಕುಡುಕರೇ, ರೋದಿಸಿರಿ. ದ್ರಾಕ್ಷಾಬಳ್ಳಿ ನಾಶವಾಗಿದೆ; ಇನ್ನು ದ್ರಾಕ್ಷಾರಸ ದೊರಕದು.
6
ಶತ್ರುರಾಷ್ಟ್ರ ನನ್ನ ನಾಡನ್ನು ಆಕ್ರಮಿಸಿದೆ. ಆ ರಾಷ್ಟ್ರ ಪ್ರಬಲವಾದುದು; ಅದರ ಸೈನ್ಯ ಅಸಂಖ್ಯಾತವಾದುದು; ಅದರ ಹಲ್ಲುಗಳು ಸಿಂಹದ ಹಲ್ಲುಗಳು; ಅದರ ಕೋರೆಗಳು ಮೃಗರಾಜನ ಕೋರೆಗಳು.
7
ಅದು ನನ್ನ ದ್ರಾಕ್ಷಾತೋಟವನ್ನು ಹಾಳುಮಾಡಿದೆ; ನನ್ನ ಅಂಜೂರದ ಗಿಡವನ್ನು ಸೀಳಿಹಾಕಿದೆ; ಅದರ ತೊಗಟೆಗಳನ್ನು ಸುಲಿದು ಬಿಸಾಡಿಬಿಟ್ಟಿದೆ; ಅದರ ರೆಂಬೆಗಳು ಬಿಳಿಚಿಕೊಂಡಿವೆ.
8
ಮದುವೆಯಾಗಲಿದ್ದ ಯುವಕನನ್ನು ಕಳೆದುಕೊಂಡದ್ದಕ್ಕಾಗಿ ಗೋಣಿತಟ್ಟನ್ನು ಉಟ್ಟು ಗೋಳಾಡುವ ಯುವತಿಯಂತೆ ರೋದಿಸಿರಿ.
9
ಸರ್ವೇಶ್ವರಸ್ವಾಮಿಯ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ. ಆ ಸ್ವಾಮಿಯ ಪರಿಚಾರಕರಾದ ಯಾಜಕರು ದುಃಖತಪ್ತರಾಗಿದ್ದಾರೆ.
10
ಹೊಲಗದ್ದೆಗಳು ಹಾಳಾಗಿವೆ; ಧರೆ ದುಃಖಿಸುತ್ತಿದೆ; ಬಿತ್ತಿದ ದವಸಧಾನ್ಯ ಮಣ್ಣುಪಾಲಾಗಿದೆ; ದ್ರಾಕ್ಷಿಹಣ್ಣು ಒಣಗಿಹೋಗಿದೆ; ಎಣ್ಣೆ ಮರಗಳು ಬಾಡಿಹೋಗಿವೆ.
11
ರೈತರೇ, ರೋದಿಸಿರಿ; ತೋಟಗಾರರೇ, ಪರಿತಪಿಸಿರಿ; ಗೋದಿಯೂ ಜವೆಗೋದಿಯೂ ಹಾಳಾಗಿವೆ; ಹೊಲದ ಬೆಳೆ ನಾಶವಾಗಿದೆ.
12
ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
13
ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ.
14
ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ.
15
ಸರ್ವೇಶ್ವರಸ್ವಾಮಿಯ ದಿನ ಸಮೀಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು!
16
ದವಸಧಾನ್ಯಗಳ ವಿನಾಶವನ್ನು ಕಣ್ಣಾರೆ ಕಾಣುತ್ತಿದ್ದೇವಲ್ಲವೆ? ದೇವಾಲಯದ ಹರ್ಷ ಉತ್ಸವಗಳು ನಿಂತುಹೋಗಿವೆ.
17
ಬೀಜಗಳು ಹೆಂಟೆಗಳ ಅಡಿಯಲ್ಲೇ ಒಣಗುತ್ತಿವೆ; ಉಗ್ರಾಣಗಳು ಬರಿದಾಗಿವೆ; ದವಸಧಾನ್ಯದ ಕೊರತೆಯಿಂದ ಕಣಜಗಳು ಕುಸಿದುಬಿದ್ದಿವೆ.
18
ಪಶುಪ್ರಾಣಿಗಳು ನರಳುತ್ತಿವೆ; ದನಕರುಗಳು ಮೇವಿಲ್ಲದೆ ಕಂಗಾಲಾಗಿವೆ; ಕುರಿಮಂದೆಗಳು ಕೂಡ ಕಂಗೆಟ್ಟಿವೆ.
19
ಸರ್ವೇಶ್ವರಾ, ನಿನಗೆ ಮೊರೆಯಿಡುತ್ತೇನೆ. ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ; ವನವೃಕ್ಷಗಳೆಲ್ಲ ಬೆಂಕಿಪಾಲಾಗಿವೆ.
20
ಕಾಡುಮೃಗಗಳು ನಿನ್ನ ಕಡೆಗೆ ತಲೆಯೆತ್ತಿವೆ; ಹಳ್ಳಕೊಳ್ಳಗಳು ಬತ್ತಿಹೋಗಿವೆ; ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ.
Jump to:
Chapter 1
Chapter 2
Chapter 3
Chapter 2 →
All chapters:
1
2
3
Recommended Reading
Commentary
Joel Commentaries
→
Devotional
Joel Devotional Guide
→
Get This Bible
KNCL Study Bible
→