bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Esther 3
Esther 3
Kannada Bible (KNCL) BSI 2016
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 4 →
1
ಇದಾದನಂತರ ಅರಸ ಅಹಷ್ವೇರೋಷನು ಆಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಉನ್ನತ ಪದವಿಗೇರಿಸಿ ಅವನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ತನ್ನ ಎಲ್ಲಾ ಪದಾಧಿಕಾರಿಗಳಲ್ಲಿ ಅವನಿಗೆ ಪ್ರಥಮಸ್ಥಾನವನ್ನು ಅನುಗ್ರಹಿಸಿದನು.
2
ಅರಸನ ಆಜ್ಞಾನುಸಾರ ಅರಮನೆಯಲ್ಲಿದ್ದ ಪರಿಚಾರಕರೆಲ್ಲರೂ ಅವನಿಗೆ ನಮಸ್ಕರಿಸುತ್ತಿದ್ದರು. ಆದರೆ ಮೊರ್ದೆಕೈ ಮಾತ್ರ ಹಾಗೆ ಮಾಡುತ್ತಿರಲಿಲ್ಲ.
3
ಇದನ್ನು ಗಮನಿಸಿದ ಅರಮನೆಯ ದ್ವಾರಪಾಲಕರು, “ನೀನು ಅರಸನ ಆಜ್ಞೆಯನ್ನು ಮೀರುವುದೇಕೆ?” ಎಂದು ಮೊರ್ದೆಕೈಯನ್ನು ಕೇಳಿದರು.
4
ಹೀಗೆ ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ಹಟವು ಎಲ್ಲಿಯವರೆಗೆ ಸಾಗುವುದೊ ನೋಡಿಯೇ ಬಿಡಬೇಕೆಂದು ಅವನ ಈ ವರ್ತನೆಯ ಬಗ್ಗೆ ಹಾಮಾನನಿಗೆ ದೂರು ಹೇಳಿದರು.
5
ಮೊರ್ದೆಕೈಯು ತನಗೆ ಬಾಗಿ ನಮಸ್ಕಾರ ಮಾಡದಿದ್ದುದನ್ನು ಕಂಡು ಹಾಮಾನನು ಅವನ ಮೇಲೆ ಕಡುಗೋಪಗೊಂಡನು.
6
ಅವನು ಮೊರ್ದೆಕೈ ಒಬ್ಬನ ಮೇಲೆ ಕೈಮಾಡುವುದು ಸಾಲದೆಂದೆಣಿಸಿ ಇವನು ಯೆಹೂದ್ಯ ಜನಾಂಗದವನೆಂದು ಕೇಳಿದ ಮೇಲೆ ಅಹಷ್ವೇರೋಷನ ರಾಜ್ಯದಲ್ಲಿದ್ದ ಇವನ ಬಂಧುಬಳಗದವರನ್ನೆಲ್ಲಾ, ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಲು ತೀರ್ಮಾನಿಸಿದನು.
7
ಅರಸ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆಯ ತಿಂಗಳು ಆದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ‘ಪೂರ’ನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
8
ಹಾಮಾನನು ಅರಸ ಅಹಷ್ವೇರೋಷನಿಗೆ ಹೀಗೆಂದನು: “ನಿಮ್ಮ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ವಾಸಿಸುವ ಒಂದು ಜನಾಂಗವಿದೆ. ಅದು ಇತರ ಜನಾಂಗಗಳ ಮಧ್ಯೆ ಹರಡಿಕೊಂಡಿದ್ದರೂ ತನ್ನ ರೀತಿನೀತಿಗಳಲ್ಲಿ ಅವರಿಂದ ಪ್ರತ್ಯೇಕವಾಗಿಯೇ ಉಳಿಯುತ್ತದೆ. ಅರಸರ ನಿಯಮಗಳನ್ನಂತೂ ಈ ಜನಾಂಗದವರು ಅನುಸರಿಸುವುದೇ ಇಲ್ಲ. ಹೀಗಿರುವಲ್ಲಿ ಇಂಥವರನ್ನು ಅರಸರು ಸುಮ್ಮನೆ ಬಿಡುವುದು ಸರಿಯಲ್ಲ.
9
ಅರಸರಿಗೆ ಸಮ್ಮತಿ ಆದರೆ ಅವರನ್ನು ನಿರ್ಮೂಲಮಾಡುವಂತೆ ಆಜ್ಞೆ ಒಂದನ್ನು ಹೊರಡಿಸಬೇಕು. ಹಾಗೆ ಮಾಡಿದ್ದಲ್ಲಿ, ನಾನು ರಾಜಭಂಡಾರಕ್ಕಾಗಿ 340,000 ಕಿಲೋಗ್ರಾಂ ಬೆಳ್ಳಿಯನ್ನು ಖಜಾಂಚಿಯರ ಕೈಗೊಪ್ಪಿಸುವೆನು,” ಎಂದು ಹೇಳಿದನು.
10
ಇದನ್ನು ಕೇಳಿದ ಅರಸನು ತನ್ನ ಕೈಬೆರಳಿನಲ್ಲಿದ್ದ ಮುದ್ರೆ ಉಂಗುರವನ್ನು ತೆಗೆದು ಆಗಾಗನ ವಂಶಸ್ಥನೂ ಹೆಮ್ಮೆದಾತನ ಮಗನೂ ಯೆಹೂದ್ಯರ ಕಡುವೈರಿಯೂ ಆದ ಹಾಮಾನನಿಗೆ ಕೊಟ್ಟು,
11
“ಆ ಬೆಳ್ಳಿ ನಿನ್ನಲ್ಲೇ ಇರಲಿ: ಆ ಜನರಿಗಾದರೋ ನಿನಗೆ ಉಚಿತವೆಂದು ಕಂಡುಬಂದ ರೀತಿಯಲ್ಲಿ ನೀನು ಮಾಡಬಹುದು,” ಎಂದು ಹೇಳಿದನು.
12
ಮೊದಲನೇ ತಿಂಗಳ ಹದಿಮೂರನೆಯ ದಿನ ರಾಜಲೇಖಕರನ್ನು ಕರೆಸಲಾಯಿತು. ಇವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾ ಸಂಸ್ಥಾನಾಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಅವರವರ ಸ್ವದೇಶಿ ಲಿಪಿಗಳಲ್ಲೂ ಭಾಷೆಗಳಲ್ಲೂ ಬರೆದರು. ಅರಸ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾದ ಈ ಪತ್ರಗಳು ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.
13
ಪತ್ರಗಳನ್ನು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳಿಸಲಾಯಿತು. ಅವುಗಳಲ್ಲಿ ಈ ರೀತಿ ಬರೆದಿತ್ತು: “ಒಂದೇ ದಿನದಲ್ಲಿ, ಅಂದರೆ, ಹನ್ನೆರಡನೆ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರೆನ್ನದೆ ನಿಮ್ಮ ಮಧ್ಯೆ ವಾಸಿಸುವ ಎಲ್ಲಾ ಯೆಹೂದ್ಯರನ್ನು ಕೊಂದುಹಾಕಿ, ನಿರ್ಮೂಲಮಾಡಿ, ನಿರ್ನಾಮಗೊಳಿಸಿ.
14
ಅವರ ಆಸ್ತಿಯನ್ನು ಕೊಳ್ಳೆಹೊಡೆಯಿರಿ. ಎಲ್ಲರೂ ಆ ದಿನಕ್ಕೆ ಸಿದ್ಧರಾಗಿರುವಂತೆ ಈ ಪತ್ರದ ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲೂ ರಾಜಾಜ್ಞೆಯಂತೆ ಪ್ರಕಟವಾಗಲಿ.”
15
ಈ ನಿರ್ಣಯವು ಶೂಷನ್ ಅರಮನೆಯಲ್ಲಿ ಪ್ರಕಟವಾದ ಕೂಡಲೆ ಅಂಚೆಯವರು ರಾಜಾಜ್ಞೆಯ ಮೇರೆಗೆ ತ್ವರಿತವಾಗಿ ಹೊರಟರು. ಅರಸನಾದರೋ ಹಾಮಾನನೊಡನೆ ಮದ್ಯಪಾನ ಮಾಡಲು ಕುಳಿತುಕೊಂಡನು. ಅತ್ತ ಶೂಷನ್ ನಗರದಲ್ಲಿ ಎಲ್ಲೆಲ್ಲೂ ತಳಮಳ ಉಂಟಾಯಿತು.
← Chapter 2
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 4 →
All chapters:
1
2
3
4
5
6
7
8
9
10