bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Esther 9
Esther 9
Kannada Bible (KNCL) BSI 2016
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 10 →
1
ಅರಸನ ಆಜ್ಞೆಯನ್ನು, ನಿರ್ಣಯವನ್ನು ನೆರವೇರಿಸತಕ್ಕ ದಿನವು ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನವು ಬಂದಿತು. ಆ ದಿನದಲ್ಲಿ ಯೆಹೂದ್ಯರನ್ನು ತಾವೇ ಸ್ವಾಧೀನಪಡಿಸಿಕೊಳ್ಳಬಹುದೆಂದು ಅವರ ವೈರಿಗಳು ನಿರೀಕ್ಷಿಸಿದ್ದರು. ಆದರೆ ಅದಕ್ಕೆ ಬದಲಾಗಿ ಯೆಹೂದ್ಯರೇ ತಮ್ಮ ವೈರಿಗಳನ್ನು ಸ್ವಾಧೀನಮಾಡಿಕೊಂಡರು.
2
ಆದುದರಿಂದ ಅರಸ ಅಹಷ್ವೇರೋಷನ ಸಮಸ್ತ ಸಂಸ್ಥಾನಗಳ ಪ್ರತಿಯೊಂದು ನಗರದಲ್ಲಿದ್ದ ಯೆಹೂದ್ಯರು ತಮಗೆ ಕೇಡು ಬಗೆದವರಿಗೆ ವಿರುದ್ಧವಾಗಿ ಕೈಯೆತ್ತಲು ಒಟ್ಟಾಗಿ ಸೇರಿದರು. ಎಲ್ಲರಿಗೂ ಅವರ ಭಯ ಇದ್ದುದರಿಂದ ಯಾರೂ ಅವರ ಮುಂದೆ ನಿಲ್ಲಲಾಗಲಿಲ್ಲ.
3
ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಅಧಿಕಾರ ಪ್ರಬಲವಾಗುತ್ತಾ ಬಂದುದರಿಂದ ಅವನ ಕೀರ್ತಿ ಎಲ್ಲಾ ಸಂಸ್ಥಾನಗಳಲ್ಲಿಯೂ ಹಬ್ಬಿತ್ತು.
4
ಆದುದರಿಂದ ಸಕಲ ಸಂಸ್ಥಾನಾಧಿಕಾರಿಗಳೂ ಉಪರಾಜರೂ ದೇಶಾಧಿಪತಿಗಳೂ ಮತ್ತು ಇತರ ರಾಜಸೇವಕರೂ ಅವನಿಗೆ ಭಯಪಟ್ಟು ಯೆಹೂದ್ಯರಿಗೆ ನೆರವಾದರು.
5
ಹೀಗಾಗಿ ಯೆಹೂದ್ಯರು ತಮ್ಮ ವೈರಿಗಳನ್ನೆಲ್ಲಾ ಸೋಲಿಸಿ, ಕತ್ತಿಯಿಂದ ಇರಿದು ಕೊಂದು, ನಿರ್ನಾಮಗೊಳಿಸಿದರು. ತಮ್ಮನ್ನು ಹಗೆಮಾಡುತ್ತಿದ್ದ ಶತ್ರುಗಳಿಗೆ ತಮ್ಮ ಇಷ್ಟಾನುಸಾರ ಮಾಡಿದರು.
6
ಶೂಷನ್ ನಗರದಲ್ಲೇ ಐನೂರು ಮಂದಿ ಹತರಾದರು.
7
ಹತರಾದವರಲ್ಲಿ ಯೆಹೂದ್ಯರ ವೈರಿಯಾಗಿದ್ದ ಹಮ್ಮೆದಾತನ ಮಗ ಹಾಮಾನನ ಹತ್ತುಮಂದಿ ಮಕ್ಕಳೂ ಇದ್ದರು. ಅವರ ಹೆಸರುಗಳು ಯಾವುವೆಂದರೆ - ಪರ್ಷಂದಾತ, ದಲ್ಫೋನ್, ಅಸ್ಪಾತ, ಪೋರಾತ, ಅದಲ್ಯ, ಅರೀದಾತ, ಪರ್ಮಷ್ಟ, ಅರೀಸೈ, ಅರಿದೈ, ವೈಜಾತ, ಇಷ್ಟುಮಂದಿಯನ್ನು ಕೊಂದರೂ ಯೆಹೂದ್ಯರು ಸುಲಿಗೆಗೆ ಕೈಹಾಕಲಿಲ್ಲ.
11
ಆ ದಿನ ಶೂಷನ್ ನಗರದಲ್ಲಿ ಹತರಾದವರ ಸಂಖ್ಯೆ ಅರಸನಿಗೆ ತಿಳಿದುಬಂದಾಗ ಅವನು ಎಸ್ತೇರ್ ರಾಣಿಗೆ,
12
“ಯೆಹೂದ್ಯರು ಶೂಷನ್ ನಗರದಲ್ಲೇ ಐನೂರು ಮಂದಿಯನ್ನು, ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ. ಉಳಿದ ರಾಜಸಂಸ್ಥಾನಗಳಲ್ಲಿ ಇನ್ನೆಷ್ಟುಮಂದಿಯನ್ನು ಹತಮಾಡಿರಬಹುದೋ! ನಿನ್ನ ವಿಜ್ಞಾಪನೆ ಯಾವುದಿದ್ದರೂ ನೆರವೇರಿಸುವೆನು ಕೇಳು, ನೀನು ಏನು ಕೇಳಿದರೂ ಕೊಡುವೆನು ಹೇಳು,” ಎಂದನು.
13
ಪ್ರತ್ಯುತ್ತರವಾಗಿ ಎಸ್ತೇರಳು ಅರಸನಿಗೆ, “ಇಂದಿನಂತೆ ನಾಳೆಯೂ ರಾಜಾಜ್ಞೆ ಜಾರಿಯಲ್ಲಿರಬೇಕು ಹಾಗು ಹಾಮಾನನ ಹತ್ತು ಮಕ್ಕಳ ಶವಗಳನ್ನು ಗಲ್ಲಿಗೇರಿಸುವಂತೆ ಅಪ್ಪಣೆಯಾಗಬೇಕು,” ಎಂದು ಬೇಡಿಕೊಂಡಳು.
14
ಅರಸನು ಎಸ್ತೇರಳಿಗೆ ತನ್ನ ಇಚ್ಛೆಯಂತೆ ಮಾಡಲು ಅಪ್ಪಣೆಕೊಟ್ಟನು. ಕೂಡಲೆ ಇದಕ್ಕೆ ಸಂಬಂಧಪಟ್ಟ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾಯಿತು. ಹಾಮಾನನ ಹತ್ತುಮಂದಿ ಮಕ್ಕಳ ಶವಗಳನ್ನು ಗಲ್ಲಿಗೇರಿಸಲಾಯಿತು.
15
ಶೂಷನಿನ ಯೆಹೂದ್ಯರು ಫಾಲ್ಗುಣಮಾಸದ ಹದಿನಾಲ್ಕನೆಯ ದಿನದಂದೂ ಒಟ್ಟಾಗಿ ಸೇರಿ ಮುನ್ನೂರು ಮಂದಿಯನ್ನು ಕೊಂದುಹಾಕಿದರು. ಆದರೆ ಸುಲಿಗೆಗೆ ಕೈಹಾಕಲಿಲ್ಲ.
16
ಹಾಗೆಯೆ ಇತರ ರಾಜಸಂಸ್ಥಾನಗಳಲ್ಲೂ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ, ತಮ್ಮ ಪ್ರಾಣರಕ್ಷಣೆಗಾಗಿ ಒಟ್ಟಾಗಿ ಸೇರಿ, ತಮ್ಮ ವೈರಿಗಳಲ್ಲಿ ಎಪ್ಪತ್ತೈದು ಸಾವಿರಮಂದಿಯನ್ನು ಕೊಂದುಹಾಕಿದರು. ಆದರೆ, ಸುಲಿಗೆಗೆ ಕೈಹಾಕಲಿಲ್ಲ.
17
ಇದು ನಡೆದದ್ದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ. ಅವರು ಹದಿನಾಲ್ಕನೆಯ ದಿನದಂದು ವಿಶ್ರಮಿಸಿದರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
18
ಶೂಷನಿನ ಯೆಹೂದ್ಯರು ಹದಿಮೂರನೇ ಹಾಗೂ ಹದಿನಾಲ್ಕನೇ ದಿನ ಒಟ್ಟಾಗಿ ಸೇರಿಬಂದುದರಿಂದ, ಅವರು ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.
19
ಈ ಕಾರಣದಿಂದಾಗಿ ಬಯಲುಪ್ರದೇಶದ ಗ್ರಾಮನಿವಾಸಿ ಯೆಹೂದ್ಯರು ಹದಿನಾಲ್ಕನೇ ದಿನವನ್ನು ಶುಭದಿನವೆಂತಲೂ ನಗರವಾಸಿ ಯೆಹೂದ್ಯರು ಹದಿನೈದನೆಯ ದಿನವನ್ನು ಶುಭದಿನವೆಂತಲೂ ಆಚರಿಸಿ, ಉತ್ಸವ ಭೋಜನಮಾಡಿ, ಒಬ್ಬರಿಗೊಬ್ಬರು ತಿಂಡಿತೀರ್ಥಗಳನ್ನು ವಿನಿಮಯಿಸಿಕೊಳ್ಳುತ್ತಾರೆ.
20
ಮೊರ್ದೆಕೈಯು ಅಹಷ್ವೇರೋಷನ ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಎಲ್ಲಾ ಯೆಹೂದ್ಯರಿಗೆ, ಸಮೀಪದಲ್ಲೂ ದೂರದಲ್ಲೂ ಇದ್ದವರು ಎಲ್ಲರಿಗೂ ಪತ್ರಗಳ ಮುಖಾಂತರ ಈ ಕೆಳಕಂಡ ಸಂಗತಿಗಳನ್ನು ತಿಳಿಯಪಡಿಸಿದನು:
21
‘ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆ ಮತ್ತು ಹದಿನೈದನೆಯ ದಿನಗಳನ್ನು ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮ ಎಂದು ಭಾವಿಸಬೇಕು.
22
ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.
23
ಮೊರ್ದೆಕೈಯ ಪತ್ರದಲ್ಲಿ ನಿರೂಪಿತವಾಗಿದ್ದ ಪ್ರಕಾರವೇ ಯೆಹೂದ್ಯರು ಅನುಸರಿಸಿದರು. ಅಂದಿನ ವರ್ಷ ಆಚರಿಸಿದ ಹಬ್ಬವು ತಮ್ಮಲ್ಲಿ ವಾರ್ಷಿಕ ಉತ್ಸವವಾಗಿ ಊರ್ಜಿತಗೊಳ್ಳಬೇಕೆಂದು ತೀರ್ಮಾನಿಸಿಕೊಂಡರು.
24
ಯೆಹೂದ್ಯರೆಲ್ಲರ ಕಡುವೈರಿಯಾಗಿದ್ದ ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿಕೊಂಡು ಅವರನ್ನು ಹಾಳುಮಾಡಲು, ನಿರ್ನಾಮಗೊಳಿಸಲು ಪೂರನ್ನು ಅಂದರೆ ಚೀಟನ್ನು ಹಾಕಿದ್ದನು.
25
ಈ ವಿಷಯ ಅರಸನ ಕಿವಿಗೆ ಬಿದ್ದಾಗ, ಅವನು, ‘ಹಾಮಾನನು ಯೆಹೂದ್ಯರ ವಿರುದ್ಧ ಯೋಚಿಸಿದ ಕೇಡು ಅವನ ತಲೆಯ ಮೇಲೆಯೇ ಬರಲಿ. ಅವನನ್ನು ಅವನ ಮಕ್ಕಳನ್ನೂ ಗಲ್ಲಿಗೇರಿಸಿರಿ,’ ಎಂದು ಅಪ್ಪಣೆಮಾಡಿದ್ದನು.
26
ಆ ‘ಪೂರ್’ ಎಂಬ ಪದದ ಆಧಾರದ ಮೇಲೆ ಆ ದಿನಗಳಿಗೆ ‘ಪೂರಿಮ್’ ಎಂಬ ಹೆಸರು ಆಯಿತು. ಅರಸನು ಪತ್ರದಲ್ಲಿ ಬರೆದ ಮಾತುಗಳನ್ನೂ, ಅವುಗಳ ಸಂಬಂಧವಾಗಿ ತಾವೇ ಸ್ವತಃ ಅನುಭವಿಸಿದ್ದನ್ನೂ, ತಮಗೆ ಸಂಭವಿಸಿದ್ದನ್ನೂ ಸ್ಮರಿಸಿಕೊಂಡು ಪ್ರತಿವರ್ಷವೂ ಆ ಎರಡು ದಿನಗಳನ್ನು,
27
ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವುದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿನಿಯಮಗಳಾಬೇಕು;
28
ಯುಗಯುಗಾಂತರಕ್ಕೂ ಎಲ್ಲಾ ಗೋತ್ರ, ಸಂಸ್ಥಾನ, ನಗರದವರು ಈ ದಿನಗಳನ್ನು ಸ್ಮರಿಸಿ ಆಚರಿಸಬೇಕು; ಈ ಪೂರಿಮ್ ಹಬ್ಬವು ಯೆಹೂದ್ಯರಲ್ಲಿ ಎಂದಿಗೂ ನಿಂತುಹೋಗಬಾರದು ಹಾಗೂ ಅದರ ಸ್ಮರಣೆ ಅವರ ಸಂತಾನದವರಲ್ಲಿ ಅಳಿದುಹೋಗಲೇಬಾರದು ಎಂದೂ ತೀರ್ಮಾನಿಸಿಕೊಂಡರು.
29
ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಪೂರಿಮ್ ಹಬ್ಬದ ಆಚರಣೆಗೆ ಸಂಬಂಧಪಟ್ಟ ಆ ಎರಡನೇ ಶಾಸನವನ್ನು ದೃಢಪಡಿಸುವುದಕ್ಕಾಗಿ ಮೊರ್ದೆಕೈಯ ಸಹಾಯವನ್ನು ಪಡೆದು ಅಧಿಕೃತ ಪತ್ರಗಳನ್ನು ಬರೆದಳು.
30
ಮೊರ್ದೆಕೈ, ಅಹಷ್ವೇರೋಷನ ರಾಜ್ಯದ ನೂರಿಪ್ಪತ್ತೇಳು ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಯೆಹೂದ್ಯರೆಲ್ಲರಿಗೂ ಆ ಪತ್ರಗಳನ್ನು ಕಳುಹಿಸಿದನು.
31
ದಯೆ ಹಾಗೂ ಸತ್ಯತೆಯ ಮಾತುಗಳಿಂದ ತುಂಬಿದ್ದ ಆ ಪತ್ರಗಳಲ್ಲಿ ಎಸ್ತೇರಳು, “ಯೆಹೂದ್ಯರು ತಾವೂ ತಮ್ಮ ಸಂತತಿಯವರೆಲ್ಲರೂ ಉಪವಾಸ, ಪ್ರಲಾಪದಿನಗಳನ್ನು ಪ್ರತಿವರ್ಷ ತಪ್ಪದೆ ಆಚರಿಸಬೇಕು; ತಾವೇ ಗೊತ್ತುಮಾಡಿಕೊಂಡ ಪ್ರಕಾರ ಈ ಪೂರಿಮ್ ದಿನಗಳನ್ನು ತನ್ನ ಮತ್ತು ಯೆಹೂದ್ಯನಾದ ಮೊರ್ದಕೈಯ ಆದೇಶದಂತೆ ಪ್ರತಿವರ್ಷವೂ ನಿಯಮಿತ ಕಾಲದಲ್ಲಿ ತಪ್ಪದೆ ಆಚರಿಸಬೇಕು,” ಎಂದು ಬರೆದಿದ್ದಳು.
32
ಎಸ್ತೇರಳು ಹೊರಡಿಸಿದ ಈ ನಿರೂಪವು ಪೂರಿಮ್ ಹಬ್ಬದ ಆಚರಣೆಯನ್ನು ಸ್ಥಾಪಿಸಿತು ಮತ್ತು ಅದು ಗ್ರಂಥದಲ್ಲೂ ಲಿಖಿತವಾಯಿತು.
← Chapter 8
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 10 →
All chapters:
1
2
3
4
5
6
7
8
9
10