bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
Habakkuk 2
Habakkuk 2
Kannada Bible (KNCL) BSI 2016
← Chapter 1
Jump to:
Chapter 1
Chapter 2
Chapter 3
Chapter 3 →
1
“ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲುಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರುನೋಡುವೆನು.”
2
ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು.
3
ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು.
4
ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.
5
ಐಶ್ವರ್ಯ ಮೋಸಕರ, ಮದವೇರಿದವನು ಮತ್ತನಾದವನಂತೆ ಅಸ್ಥಿರ. ಅವನ ಅತಿಯಾಸೆ ಪಾತಾಳದಷ್ಟು ವಿಶಾಲ. ಮೃತ್ಯುವಿನಂತೆ ಅವನಿಗೆ ತೃಪ್ತಿಯೇ ಇಲ್ಲ. ಸಕಲ ಜನಾಂಗಗಳನ್ನು ಬಲೆಯೊಳಗೆ ಎಳೆದುಕೊಳ್ಳುತ್ತಾನೆ. ಸಮಸ್ತ ಜನಾಂಗಗಳನ್ನು ರಾಶಿಮಾಡಿಕೊಳ್ಳುತ್ತಾನೆ.
6
ಆದರೆ ಹೀಗೆ ಅವನಿಂದ ಆಕರ್ಷಿತರಾದವರೆಲ್ಲ ಅವನ ಸಮಾಚಾರವೆತ್ತಿ ಗೇಲಿಯ ಲಾವಣಿಕಟ್ಟುವರು. “ತನ್ನದಲ್ಲದನ್ನು ಹೆಚ್ಚು ಹೆಚ್ಚಾಗಿ ತುಂಬಿಸಿಕೊಂಡವನಿಗೆ ಧಿಕ್ಕಾರ! ಬಡ್ಡಿಗಾಗಿ ಅಡವಿಟ್ಟ ವಸ್ತುಗಳನ್ನು ರಾಶಿಮಾಡಿಕೊಂಡವನಿಗೆ ಧಿಕ್ಕಾರ! ಎಷ್ಟುಕಾಲ ಹೀಗೆ ಮಾಡಿಯಾನು?’
7
ನಿನ್ನ ಸಾಲಗಾರರೇ ತಟ್ಟನೆ ನಿನಗೆದುರಾಗಿ ನಿಲ್ಲುವರು; ಬಾಕಿದಾರರೇ ಎಚ್ಚೆತ್ತು ನಿನಗೆ ಬೆದರಿಕೆ ಹಾಕುವರು. ಕೊಳ್ಳೆಹೊಡೆದು ನಿನ್ನನ್ನು ಲೂಟಿಮಾಡುವರು.
8
ನೀನು ಅನೇಕ ಜನಾಂಗಗಳನ್ನು ಕೊಳ್ಳೆಹೊಡೆದಿರುವೆ. ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಈ ಕಾರಣ, ಜನಾಂಗಗಳಲ್ಲಿ ಅಳಿದುಳಿದವರೆಲ್ಲರು ನಿನ್ನನ್ನು ಕೊಳ್ಳೆಹೊಡೆಯುವರು.
9
ಕೇಡಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನ್ನ ನಿವಾಸವನ್ನು ಎತ್ತರವಾಗಿ ಕಟ್ಟಿಕೊಂಡೆ. ನಿನ್ನ ಕುಟುಂಬಕ್ಕಾಗಿ ಇತರರ ಆಸ್ತಿಯನ್ನು ಅನ್ಯಾಯವಾಗಿ ದೋಚಿಕೊಂಡೆ, ನಿನ್ನಗೆ ಧಿಕ್ಕಾರ!
10
ನಿನ್ನ ಯೋಜನೆಗಳಿಂದ ನಿನ್ನ ಮನೆತನಕ್ಕೆ ಅಪಕೀರ್ತಿ ತಂದುಕೊಂಡಿರುವೆ. ಹಲವಾರು ನಾಡುಗಳನ್ನು ನಿರ್ಮೂಲಮಾಡಿ ನಿನ್ನ ವಂಶಕ್ಕೆ ವಿನಾಶವನ್ನು ಬರಮಾಡಿಕೊಂಡಿರುವೆ.
11
ಗೋಡೆಯಲ್ಲಿ ಇರುವ ಕಲ್ಲುಗಳೇ ನಿನಗೆ ವಿರುದ್ಧವಾಗಿ ಕೂಗುವುವು. ಚಾವಣಿಯ ತೊಲೆಗಳು ಸಹ ಅದಕ್ಕೆ ಮಾರ್ದನಿ ಕೂಡಿಸುವುವು.
12
ನರಹತ್ಯೆಯಿಂದ ನಗರಗಳನ್ನು ನಿರ್ಮಿಸುವವನಿಗೆ ಧಿಕ್ಕಾರ! ಅನ್ಯಾಯವಾದ ಅಸ್ತಿವಾರದ ಮೇಲೆ ಊರನ್ನು ಕಟ್ಟುವವನಿಗೆ ಧಿಕ್ಕಾರ!
13
ಜನರು ದುಡಿದದ್ದು ಬೆಂಕಿಗೆ ತುತ್ತಾಗುವುದು. ಜನಾಂಗಗಳು ಪಟ್ಟ ಪರಿಶ್ರಮ ವ್ಯರ್ಥವಾಗುವುದು. ಇದೆಲ್ಲ ಸೇನಾಧೀಶ್ವರ ಸರ್ವೇಶ್ವರನ ಚಿತ್ತವಷ್ಟೆ.
14
ಸಮುದ್ರವು ನೀರಿನಿಂದ ತುಂಬಿ ಇರುವಂತೆ ಜಗವು ಸರ್ವೇಶ್ವರಸ್ವಾಮಿಯ ಮಹಿಮೆಯ ಜ್ಞಾನದಿಂದ ತುಂಬಿರುವುದು.
15
ನಿನ್ನ ರೋಷವನ್ನು ಮಧುಪಾನಕ್ಕೆ ಬೆರಸಿ, ಅದರಿಂದ ನಿನ್ನ ನೆರೆಯವರನ್ನು ಮತ್ತರಾಗಿಸಿ, ಅವರ ಬೆತ್ತಲೆತನವನ್ನು ನೋಡಬೇಕೆಂದಿರುವ ನಿನಗೆ ಧಿಕ್ಕಾರ!
16
ನೀನು ಸನ್ಮಾನದಿಂದಲ್ಲ, ಅವಮಾನದಿಂದ ತುಂಬಿರುವೆ; ನೀನೂ ಕುಡಿ; ಕುಡಿದು ನಗ್ನನಾಗು. ಸರ್ವೇಶ್ವರಸ್ವಾಮಿಯ ಬಲಗೈಯಲ್ಲಿರುವ ಕೋಪದ ಕೊಡ ನಿನ್ನ ಪಾಲಿಗೂ ಬರುವುದು. ಅವಮಾನವೇ ನಿನ್ನ ಸನ್ಮಾನವನ್ನು ಆವರಿಸಿಬಿಡುವುದು.
17
ನೀನು ಜನರ ರಕ್ತವನ್ನು ಸುರಿಸಿರುವೆ. ನಾಡುಗಳನ್ನೂ ನಗರಗಳನ್ನೂ ಅವುಗಳ ನಿವಾಸಿಗಳನ್ನೂ ಹಿಂಸಿಸಿರುವೆ. ಲೆಬನೋನ್ ಅರಣ್ಯಗಳನ್ನೂ ಕಡಿದುಹಾಕಿರುವೆ. ಈಗ ನಿನ್ನನ್ನೇ ಕಡಿದುಹಾಕಲಾಗುವುದು. ಅದರ ಪ್ರಾಣಿಪಕ್ಷಿಗಳನ್ನು ನಾಶಮಾಡಿರುವೆ. ಈಗ ಅವು ನಿನಗೆ ಭಯಾನಕವಾಗಿರುವುವು.
18
ಕೆತ್ತನೆಯ ವಿಗ್ರಹದಿಂದ ಪ್ರಯೋಜನ ಏನು? ಅದು ಕೇವಲ ಮಾನವನ ಕೃತಿ, ಸುಳ್ಳು ಕಣಿಗಾಗಿ ಇಟ್ಟುಕೊಂಡ ಎರಕದ ಗೊಂಬೆ. ಅದನ್ನು ನಿರ್ಮಿಸಿದಾತನಿಗೆ ಅದು ಯಾವ ಅಭಯವನ್ನು ತಾನೇ ತಂದೀತು? ಅದು ಬಾಯ್ದೆರೆಯಲಾಗದ ಮೂಕ ಬೊಂಬೆಯಷ್ಟೆ.
19
ಮರದ ತುಂಡಿಗೆ, ‘ಎಚ್ಚೆತ್ತುಕೊ’; ಜಡಕಲ್ಲಿಗೆ, ‘ಎದ್ದೇಳು’ ಎಂದು ಆಜ್ಞಾಪಿಸುವವನು ನಿಜಕ್ಕೂ ಬುದ್ಧಿಹೀನನು. ಬೊಂಬೆಯು ಬೋಧಿಸಬಲ್ಲದೇ? ಬೆಳ್ಳಿಬಂಗಾರವನ್ನು ಅದಕ್ಕೆ ಹೊದಿಸಿರುವುದೇನೋ ನಿಜ. ಆದರೆ ಅದಕ್ಕೆ ಉಸಿರೋ ಇಲ್ಲವೇ ಇಲ್ಲ.
20
ಸರ್ವೇಶ್ವರ ಪ್ರಸನ್ನನಾಗಿಹನು ಪವಿತ್ರಾಲಯದಲ್ಲಿ; ಜಗವೆಲ್ಲ ಮೌನತಾಳಲಿ ಆತನ ಸನ್ನಿಧಿಯಲ್ಲಿ.
← Chapter 1
Jump to:
Chapter 1
Chapter 2
Chapter 3
Chapter 3 →
All chapters:
1
2
3