bible
ra
🌐 Language
English
Español
Français
Deutsch
Português
Italiano
Nederlands
Русский
中文
日本語
한국어
العربية
Türkçe
Tiếng Việt
ไทย
Indonesia
All Languages
Home
/
Kannada
/
Kannada Bible (KNCL) BSI 2016
/
2 Kings 17
2 Kings 17
Kannada Bible (KNCL) BSI 2016
← Chapter 16
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 18 →
1
ಜುದೇಯದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಏಲನ ಮಗ ಹೋಶೇಯನು ಇಸ್ರಯೇಲರ ಅರಸನಾಗಿ ಸಮಾರಿಯದಲ್ಲಿ ಒಂಬತ್ತು ವರ್ಷ ಆಳಿದನು.
2
ಇವನು ತನ್ನ ಪೂರ್ವಿಕರಾದ ಇಸ್ರಯೇಲಿನ ಅರಸರಷ್ಟು ಕೆಟ್ಟವನಾಗಿರಲಿಲ್ಲ. ಆದರೂ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದನು.
3
ಅಸ್ಸೀರಿಯದ ಅರಸ ಶಲ್ಮನೆಸರನು ಇವನಿಗೆ ವಿರುದ್ಧ ದಂಡೆತ್ತಿ ಬಂದಾಗ ಇವನು ಇವನಿಗೆ ಅಧೀನನಾಗಿ ಕಪ್ಪಕೊಡುವವನಾದನು.
4
ಕೆಲವು ವರ್ಷಗಳಾದನಂತರ, ಇವನು ಪ್ರತಿ ವರ್ಷವೂ ಕೊಡಬೇಕಾದ ಕಪ್ಪವನ್ನು ಕೊಡದೆಹೋದನು; ಅದು ಮಾತ್ರವಲ್ಲ, ಈಜಿಪ್ಟಿನ ಅರಸನಾದ ಸೋ ಎಂಬವನ ಬಳಿಗೆ ರಾಯಭಾರಿಗಳನ್ನು ಕಳುಹಿಸಿದ್ದನು. ಈ ಕಾರಣ ಅಸ್ಸೀರಿಯದ ಅರಸನು ಇವನನ್ನು ದ್ರೋಹಿಯೆಂದು ತಿಳಿದು, ಬಂಧಿಸಿ ಸೆರೆಯಲ್ಲಿಟ್ಟನು.
5
ಇದಲ್ಲದೆ, ಈ ಅಸ್ಸೀರಿಯದ ಅರಸನು ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡು ಸಮಾರಿಯಕ್ಕೆ ಬಂದು ಮೂರು ವರ್ಷಗಳವರೆಗೂ ಅದಕ್ಕೆ ಮುತ್ತಿಗೆಹಾಕಿದನು.
6
ಅದು ಹೋಶೇಯನ ಆಳ್ವಿಕೆಯ ಒಂಬತ್ತನೆಯ ವರ್ಷದಲ್ಲಿ ಅವನ ಸ್ವಾಧೀನವಾಯಿತು. ಅವನು ಎಲ್ಲಾ ಇಸ್ರಯೇಲರನ್ನು ಅಸ್ಸೀರಿಯ ದೇಶಕ್ಕೆ ಒಯ್ದು ಹಲಹು ಎಂಬ ಪ್ರಾಂತ್ಯದಲ್ಲಿ, ಹಾಬೋರ್ ನದಿಯಿರುವ ಗೋಜಾನ್ ಪ್ರಾಂತ್ಯದಲ್ಲಿ ಹಾಗು ಮೇದ್ಯರ ಪಟ್ಟಣಗಳಲ್ಲಿ ಇರಿಸಿದನು.
7
ಇಸ್ರಯೇಲರ ಈ ದುರ್ಗತಿಗೆ ಅವರ ದುರ್ನಡತೆಯೇ ಕಾರಣ: ಹೇಗೆಂದರೆ, ಅವರು ತಮ್ಮನ್ನು ಈಜಿಪ್ಟಿನ ಅರಸನಾದ ಫರೋಹನ ಕೈಯಿಂದ ಬಿಡಿಸಿ ಅವನ ರಾಜ್ಯದಿಂದ ಹೊರತಂದ ದೇವರಾದ ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿ ಅನ್ಯದೇವತೆಗಳನ್ನು ಪೂಜಿಸಿದರು.
8
ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಜನಾಂಗಗಳ ಮತ್ತು ಇಸ್ರಯೇಲ್ ರಾಜರ ದುರಾಚಾರಗಳನ್ನು ಅವರು ಅನುಸರಿಸಿದರು.
9
ತಮ್ಮ ದೇವರಾದ ಆ ಸರ್ವೇಶ್ವರನಿಗೆ ವಿರೋಧವಾದ ಕೃತ್ಯಗಳನ್ನು ಗುಪ್ತವಾಗಿ ನಡೆಸಿದರು; ಕಾವಲುಗಾರರ ಗೋಪುರವುಳ್ಳ ಚಿಕ್ಕ ಊರು ಮೊದಲುಗೊಂಡು ಕೋಟೆಕೊತ್ತಲುಗಳುಳ್ಳ ಪಟ್ಟಣದವರೆಗಿರುವ ಎಲ್ಲಾ ಊರುಗಳಲ್ಲಿ ತಮಗಾಗಿ ಪೂಜಾಸ್ಥಳಗಳನ್ನು ಏರ್ಪಡಿಸಿಕೊಂಡರು;
10
ಎಲ್ಲಾ ದಿಣ್ಣೆಗಳ ಮೇಲೆ ಮತ್ತು ಎಲ್ಲಾ ಹಸಿರು ಮರಗಳ ಕೆಳಗೆ ಕಲ್ಲುಗಂಬ, ಅಶೇರುವಿಗ್ರಹಸ್ಥಂಭ ಇವುಗಳನ್ನು ಸ್ಥಾಪಿಸಿದರು.
11
ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ಅವರನ್ನು ರೇಗಿಸಿದರು;
12
ಸರ್ವೇಶ್ವರನ ಆಜ್ಞೆಯನ್ನು ಮೀರಿ ವಿಗ್ರಹಗಳನ್ನು ಆರಾಧಿಸಿದರು.
13
ದರ್ಶಿನಿಗಳೆನಿಸಿಕೊಂಡ ತಮ್ಮ ಪ್ರವಾದಿಗಳ ಮುಖಾಂತರ ಇಸ್ರಯೇಲ ಯೆಹೂದ್ಯರಿಗೆ, “ನೀವು ನಿಮ್ಮ ದುರಾಚಾರವನ್ನು ಬಿಟ್ಟು ನಾನು ನಿಮ್ಮ ಪೂರ್ವಜರಿಗೂ ನನ್ನ ದಾಸರಾದ ಪ್ರವಾದಿಗಳ ಮುಖಾಂತರ ನಿಮಗೂ ಕೊಟ್ಟಂಥ ನನ್ನ ಎಲ್ಲಾ ಆಜ್ಞಾವಿಧಿನಿಯಮಗಳನ್ನು ಕೈಕೊಂಡು ನಡೆಯಿರಿ,” ಎಂದು ಖಂಡಿತವಾಗಿ ಹೇಳಿದರು.
14
ಆದರೆ ಅವರು, ದೇವರಾದ ಸರ್ವೇಶ್ವರನನ್ನು ನಂಬದೆ, ಅವರ ಆಜ್ಞೆಗಳಿಗೆ ಮಣಿಯದೆಯಿದ್ದ ತಮ್ಮ ಹಿರಿಯರಂತೆ, ಕಿವಿಗೊಡದೆ ಹೋದರು.
15
ಸರ್ವೇಶ್ವರ ತಮ್ಮ ಪೂರ್ವಜರಿಗೆ ಕೊಟ್ಟ ವಿಧಿನಿಬಂಧನೆಗಳನ್ನೂ ತಮಗೆ ಹೇಳಿಸಿದ ಬುದ್ಧಿವಾಕ್ಯಗಳನ್ನೂ ತಿರಸ್ಕರಿಸಿ, ಮಿಥ್ಯಾದೇವತೆಗಳನ್ನು ಪೂಜಿಸಿ ನಿಸ್ಸಾರ್ಥಕರಾದರು. ಸುತ್ತಣ ಜನಾಂಗಗಳನ್ನು ಅನುಸರಿಸಬಾರದೆಂದು ಸರ್ವೇಶ್ವರ ಆಜ್ಞಾಪಿಸಿದ್ದರೂ ಕೇಳದೆ ಆ ಜನಾಂಗಗಳನ್ನೇ ಅನುಸರಿಸಿದರು.
16
ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಗಳನ್ನೆಲ್ಲಾ ಮೀರಿ, ಎರಡು ಎರಕದ ಹೋರಿಕರುಗಳ ಮೂರ್ತಿಗಳನ್ನು ಮಾಡಿಕೊಂಡರು; ಅಶೇರ ವಿಗ್ರಹಸ್ಥಂಭಗಳನ್ನು ನಿಲ್ಲಿಸಿಕೊಂಡರು; ಆಕಾಶಸೈನ್ಯ ಹಾಗು ಬಾಳ್ ದೇವತೆಗಳನ್ನು ಪೂಜಿಸಿದರು;
17
ತಮ್ಮ ಗಂಡುಹೆಣ್ಣು ಮಕ್ಕಳನ್ನು ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದರು. ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟವುಗಳನ್ನು ಮಾಡಿದರು. ಕಣಿಹೇಳುವುದು, ಯಂತ್ರಮಂತ್ರಗಳನ್ನು ಮಾಡುವುದು, ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನೇ ಮಾರಿಬಿಟ್ಟು ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದರು.
18
ಈ ಪ್ರಕಾರ ನಡೆದುದರಿಂದ ಸರ್ವೇಶ್ವರ ಅವರ ಮೇಲೆ ಕಡುಕೋಪಗೊಂಡು ಯೆಹೂದಕುಲದವರ ಹೊರತು, ಉಳಿದ ಎಲ್ಲಾ ಕುಲಗಳವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು.
19
ಜುದೇಯದವರು ಸಹ ತಮ್ಮ ದೇವರಾದ ಸರ್ವೇಶ್ವರನ ಆಜ್ಞೆಯನ್ನು ಕೈಕೊಳ್ಳದೆ ಇಸ್ರಯೇಲರ ಪದ್ಧತಿಯನ್ನು ಅನುಸರಿಸಿದ್ದರಿಂದ,
20
ಇಸ್ರಯೇಲ್ ಕುಲಗಳಲ್ಲಿ ಉಳಿದಿದ್ದ ಇವರನ್ನೂ ಹೇಸಿ, ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟು, ಸೂರೆಮಾಡುವವರಿಗೆ ಒಪ್ಪಿಸಿ, ಶಿಕ್ಷಿಸಿದರು.
21
ಇಸ್ರಯೇಲ್ ರಾಜ್ಯವನ್ನು ದಾವೀದ ಸಂತಾನದವರ ಕೈಯಿಂದ ಕಿತ್ತುಕೊಂಡ ನಂತರ, ಇಸ್ರಯೇಲರು ನೆಬಾಟನ ಮಗ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಅವನು ಅವರನ್ನು ಸರ್ವೇಶ್ವರನ ಭಕ್ತಿಮಾರ್ಗದಿಂದ ತಪ್ಪಿಸಿ ಮಹಾಪಾಪಕ್ಕೆ ಒಳಪಡಿಸಿದನು.
22
ಅವರು ಯಾರೊಬ್ಬಾಮನ ದುರ್ಮಾರ್ಗದಲ್ಲೇ ನಡೆಯುವುದನ್ನು ಬಿಡಲಿಲ್ಲವಾದುದರಿಂದ
23
ಸರ್ವೇಶ್ವರ, ತಮ್ಮ ದಾಸರಾದ ಎಲ್ಲಾ ಪ್ರವಾದಿಗಳ ಮುಖಾಂತರ ಭವಿಷ್ಯ ನುಡಿದಂತೆ, ಅವರನ್ನು ತಮ್ಮ ಸನ್ನಿಧಿಯಿಂದ ತಳ್ಳಿಬಿಟ್ಟರು. ಅವರು ಸೆರೆಯವರಾಗಿ ತಮ್ಮ ನಾಡಿನಿಂದ ಅಸ್ಸೀರಿಯಾ ದೇಶಕ್ಕೆ ಒಯ್ಯಲ್ಪಟ್ಟು ಇಂದಿನವರೆಗೂ ಅಲ್ಲೇ ಇರುತ್ತಾರೆ.
24
ಅಸ್ಸೀರಿಯಾದ ಅರಸನು ಸಮಾರಿಯಾ ಪಟ್ಟಣಗಳಲ್ಲಿ ವಾಸವಾಗಿದ್ದ ಇಸ್ರಯೇಲರನ್ನು ಸೆರೆಯಾಗಿ ಒಯ್ದನಂತರ ಅವರಿಗೆ ಬದಲಾಗಿ ಆ ಪಟ್ಟಣಗಳಿಗೆ ಬಾಬೆಲ್, ಕೂತಾ, ಅವ್ವಾ, ಹಮಾತ್, ಸೆಫರ್ವಯಿಮ್ ಎಂಬ ಊರುಗಳವರನ್ನು ಕಳುಹಿಸಿದನು. ಅವರು ಸಮಾರಿಯಾ ನಾಡನ್ನು ಸ್ವತಂತ್ರಿಸಿಕೊಂಡು ಅದರ ಪಟ್ಟಣಗಳಲ್ಲಿ ವಾಸಿಸಿದರು.
25
ಅವರಿಗೆ ಆರಂಭದಲ್ಲಿ ಸರ್ವೇಶ್ವರನಲ್ಲಿ ಭಯಭಕ್ತಿ ಇರಲಿಲ್ಲ. ಆದ್ದರಿಂದ ಸರ್ವೇಶ್ವರ ಸಿಂಹಗಳನ್ನು ಕಳುಹಿಸಿದರು; ಅವು ಅವರಲ್ಲಿ ಅನೇಕರನ್ನು ಕೊಂದವು.
26
ಅಸ್ಸೀರಿಯದ ರಾಜನ ಸೇವಕರು ಅವನಿಗೆ, “ನೀವು ಸಮಾರಿಯಾ ಪಟ್ಟಣಗಳಿಗೆ ಕಳುಹಿಸಿದ ಆಯಾ ಊರುಗಳ ಜನರು, ಆ ನಾಡಿನ ದೇವರಿಗೆ ಸೇವೆಮಾಡುವ ರೀತಿಯನ್ನು ಅರಿಯದವರಾಗಿದ್ದಾರೆ. ಆದುದರಿಂದ ಅಲ್ಲಿನ ದೇವರು ಸಿಂಹಗಳನ್ನು ಕಳುಹಿಸಿ ಅವರನ್ನು ಸಂಹರಿಸುತ್ತಿರುತ್ತಾನೆ,” ಎಂದು ತಿಳಿಸಿದರು.
27
ಆಗ ಅವನು, “ಅಲ್ಲಿಂದ ಇಲ್ಲಿಗೆ ಸೆರೆಯವರಾಗಿ ಬಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿರಿ. ಅವನು ಹೋಗಿ ಅಲ್ಲಿ ವಾಸವಾಗಿದ್ದು ಆ ನಾಡಿನ ದೇವರಿಗೆ ಸೇವೆಮಾಡುವ ರೀತಿಯನ್ನು ಅವರಿಗೆ ಕಲಿಸಲಿ,” ಎಂದು ಆಜ್ಞಾಪಿಸಿದನು.
28
ಅವರು ಸಮಾರಿಯಾದಿಂದ ಸೆರೆಯವರಾಗಿ ಬಂದಿದ್ದ ಒಬ್ಬ ಯಾಜಕನನ್ನು ಅಲ್ಲಿಗೆ ಕಳುಹಿಸಿದರು. ಇವನು ಬೇತೇಲಿನಲ್ಲಿ ವಾಸವಾಗಿದ್ದು, ಜನರಿಗೆ ಸರ್ವೇಶ್ವರನ ಭಕ್ತಿಯನ್ನು ಬೋಧಿಸಿದನು.
29
ಆದರೂ ಆ ಜನಾಂಗಗಳವರು ತಮ್ಮ ದೇವತೆವಿಗ್ರಹಗಳನ್ನು ಮಾಡಿಕೊಂಡು ತಾವು ವಾಸಿಸುವ ಊರುಗಳೊಳಗೆ ಸಮಾರಿಯದವರು ಏರ್ಪಡಿಸಿದ್ದ ಪೂಜಾಸ್ಥಳಗಳಲ್ಲಿ ಅವುಗಳನ್ನಿಟ್ಟು ಪೂಜಿಸುತ್ತಿದ್ದರು.
30
ಬಾಬಿಲೋನಿನವರು ಸುಕ್ಕೋತ್ಬೆನೋತ್, ಕೂತದವರು ನೇರ್ಗಲ್,
31
ಹಮಾತಿನವರು ಅಷೀಮಾ, ಅವ್ವೀಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾಗಿರುವ ಅದ್ರೆಮ್ಮೆಲೆಕ್ ಹಾಗು ಅನಮೆಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಮಾಡುತ್ತಿದ್ದರು.
32
ಅವರು ಸರ್ವೇಶ್ವರನ ಭಕ್ತರಾಗಿದ್ದರೂ ತಮ್ಮಲ್ಲೆ ಯಾರ್ಯಾರನ್ನೋ ಉನ್ನತ ಪೂಜಾಸ್ಥಳಗಳ ಯಾಜಕರನ್ನಾಗಿ ನೇಮಿಸಿಕೊಂಡು, ಅವರ ಮುಖಾಂತರ ಪೂಜಾಸ್ಥಳದ ಗುಡಿಗಳಲ್ಲಿ ಆರಾಧನೆ ನಡೆಸುತ್ತಿದ್ದರು.
33
ಸರ್ವೇಶ್ವರನ ಭಕ್ತರಾಗಿದ್ದ ಅವರು ತಾವು ಬಿಟ್ಟುಬಂದ ದೇಶಗಳ ಪದ್ಧತಿಯ ಪ್ರಕಾರ ತಮ್ಮ ಕುಲದೇವತೆಗಳ ಆರಾಧನೆಯನ್ನೂ ಮಾಡುತ್ತಿದ್ದರು.
34
ಆ ಕಾಲದ ಪದ್ಧತಿಯನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಸರ್ವೇಶ್ವರನಲ್ಲಿ ಭಯಭಕ್ತಿ ಇಸ್ರಯೇಲರಿಗಿಲ್ಲ; ಅವರಿಂದಲೇ ಇಸ್ರಯೇಲನೆಂಬ ಹೆಸರು ಹೊಂದಿದ ಯಕೋಬನ ಸಂತಾನದವರಿಗೆ ಕೊಡಲಾದ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ಅವರು ಅನುಸರಿಸಲಿಲ್ಲ.
35
ಇಸ್ರಯೇಲರಿಗೆ ಸರ್ವೇಶ್ವರ, “ನೀವು ಅನ್ಯದೇವತೆಗಳನ್ನು ಆರಾಧಿಸಬಾರದು, ಅವುಗಳಿಗೆ ಕೈಮುಗಿಯಲೂಬಾರದು. ಸೇವೆಮಾಡಬಾರದು, ಬಲಿ ಅರ್ಪಿಸಲೂಬಾರದು.
36
ನಿಮ್ಮನ್ನು ಮಹಾಶಕ್ತಿ ಹಾಗು ಭುಜಪರಾಕ್ರಮಗಳ ಮೂಲಕ ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ಸರ್ವೇಶ್ವರನಾದ ನನ್ನಲ್ಲೇ ಭಯಭಕ್ತಿಯುಳ್ಳವರಾಗಿ ನನಗೊಬ್ಬನಿಗೇ ಕೈಮುಗಿದು ಬಲಿಯರ್ಪಿಸಬೇಕು.
37
ನಾನು ನಿಮಗೆ ಬರೆಯಿಸಿಕೊಟ್ಟ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ತಪ್ಪದೆ ಕೈಗೊಳ್ಳಬೇಕು.
38
ಅನ್ಯದೇವತೆಗಳನ್ನು ಪೂಜಿಸಬಾರದು; ನನ್ನ ನಿಬಂಧನೆಯನ್ನು ಮರೆತು ಅನ್ಯದೇವತೆಗಳನ್ನು ಪೂಜಿಸಬಾರದು.
39
ನಿಮ್ಮ ದೇವರಾಗಿರುವ ಸರ್ವೇಶ್ವರನಾದ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರಬೇಕು; ಆಗ ನಿಮ್ಮನ್ನು ಯಾವ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸುವೆನು,” ಎಂದು ಹೇಳಿ ಅವರೊಡನೆ ಒಡಂಬಡಿಕೆ ಮಾಡಿಕೊಂಡರು.
40
ಆದರೆ ಅವರು ಅದನ್ನು ಲಕ್ಷಿಸದೆ ತಮ್ಮ ಹಿಂದಿನ ಪದ್ಧತಿಗಳನ್ನೇ ಅನುಸರಿಸಿದರು.
41
ಆ ಜನಾಂಗಗಳವರು ಸರ್ವೇಶ್ವರನ ಭಕ್ತರಾಗಿದ್ದರೂ ತಮ್ಮ ವಿಗ್ರಹಗಳನ್ನು ಆರಾಧಿಸುತ್ತಿದ್ದರು. ಅವರ ಸಂತಾನದವರು ಇಂದಿನವರೆಗೂ ಹಾಗೆಯೇ ಮಾಡುತ್ತಿದ್ದಾರೆ.
← Chapter 16
Jump to:
Chapter 1
Chapter 2
Chapter 3
Chapter 4
Chapter 5
Chapter 6
Chapter 7
Chapter 8
Chapter 9
Chapter 10
Chapter 11
Chapter 12
Chapter 13
Chapter 14
Chapter 15
Chapter 16
Chapter 17
Chapter 18
Chapter 19
Chapter 20
Chapter 21
Chapter 22
Chapter 23
Chapter 24
Chapter 25
Chapter 18 →
All chapters:
1
2
3
4
5
6
7
8
9
10
11
12
13
14
15
16
17
18
19
20
21
22
23
24
25